ಚೆನ್ನೈ: ಯುವಕನೊಬ್ಬ ಬೈಕ್ ಕದ್ದು, ಅದರ ಮಾಲೀಕರಿಗೆ ಗೊತ್ತಾದ ಬಳಿಕ ಯಾವುದೇ ತೊಂದರೆ ಬೇಡ ಎಂದು ಅದನ್ನು ಕೊರಿಯರ್ ಮಾಡಿದ ವಿಚಿತ್ರ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
ಸುಲುರ್ ನಿವಾಸಿ ವಿ ಸುರೇಶ್ ಕುಮಾರ್(34) ಎಂಬಾತನ ಬೈಕ್ ಪಾರ್ಕ್ ಮಾಡಿದ್ದ ಸ್ಥಳದಿಂದ ಮೇ 18ರಿಂದ ಕಾಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ಸುಲುರ್ ಪೊಲೀಸರ ಬಳಿ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದನು. ಅಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸದ್ಯ ಕೋವಿಡ್ 19 ವಿರುದ್ಧ ಕರ್ತವ್ಯ ನಿಭಾಯಿಸಬೇಕು. ಆ ಬಳಿಕ ಈ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಸುರೇಶ್ ಕುಮಾರ್ ತಾನೇ ತನ್ನ ಬೈಕ್ ಹುಡುಕಲು ಆರಂಭಿಸಿದ್ದಾನೆ.
ಇತ್ತ ಸುರೇಶ್, ಬೈಕ್ ಇಟ್ಟಿದ್ದ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ. ಹೀಗೆ ಸಿಸಿಟಿವಿ ನೋಡುತ್ತಿರುವಾಗ ವ್ಯಕ್ತಿಯೊಬ್ಬ ತನ್ನ ಬೈಕ್ ಕದ್ದೊಯ್ಯುತ್ತಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಆ ವಿಡಿಯೋವನ್ನು ತನ್ನ ಮೊಬೈಲ್ ಗೆ ಹಾಕಿಕೊಂಡ ಸುರೇಶ್, ಕಳ್ಳನನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗುತ್ತಾನೆ. ಕೊನೆಗೆ ಕಳ್ಳನ ಹೆಸರು ಪ್ರಶಾಂತ್, ಈತ ತಂಜಾವೂರ್ ಜಿಲ್ಲೆಯ ಮನ್ನಾರ್ ಗುಡಿ ನಿವಾಸಿಯಾಗಿದ್ದು, ತನ್ನ ಬೈಕ್ ಕಳವಾದ ಜಾಗದಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಸುರೇಶ್ಗೆ ತಿಳಿದುಬಂತು. ಮಾತ್ರವಲ್ಲದೆ ಪ್ರಶಾಂತ್ ಇತ್ತೀಚೆಗೆ ತನ್ನ ಊರಿಗೆ ತೆರಳಿರುವುದಾಗಿ ಕೂಡ ಸುರೇಶ್ ಗೆ ಗೊತ್ತಾಗುತ್ತದೆ.
ಲಾಕ್ ಡೌನ್ ಪರಿಣಾಮ ಬೇಕರಿಯಲ್ಲಿ ಕೆಲಸ ಮಾಡುವಾತ ಹಾಗೂ ಆತನ ಕುಟುಂಬ ಕಳೆದ 2 ತಿಂಗಳಿನಿಂದ ಸಿಟಿಯಲ್ಲಿಯೇ ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಗೆ ತೆರಳಲು ಆತ ಬೈಕ್ ಕಳವು ಮಾಡಿದ್ದಾನೆ. ಹಾಗೆಯೇ ಕದ್ದ ಬೈಕಿನಲ್ಲಿ ಮನೆಗೆ ಬಂದ ಬಳಿಕ ಬೈಕ್ ಮಾಲೀಕ ತನ್ನನ್ನು ಹುಡುಕುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಇದರಿಂದ ಯಾವುದೇ ತೊಂದರೆಯಲ್ಲಿ ಸಿಲುಕಬಾರದೆಂದು ಮಾಲೀಕನ ವಿಳಾಸಕ್ಕೆ ಬೈಕ್ ಕೊರಿಯರ್ ಮಾಡಿದ್ದಾನೆ.
ಇತ್ತ ತನ್ನ ಬೈಕ್ ವಾಪಸ್ ಸಿಕ್ಕಿದ ಬಳಿಕ ಮಾತನಾಡಿದ ಸುರೇಶ್, ನನಗೆ ನನ್ನ ಬೈಕ್ ವಾಪಸ್ ಸಿಕ್ಕಿರುವುದು ತುಂಬಾನೆ ಸಂತಸವಾಗಿದೆ. ನಾನು ಮತ್ತೆ ಪ್ರಕರಣ ದಾಖಲಿಸುವುದಿಲ್ಲ. ಯಾಕೆಂದರೆ ನನಗೆ ನನ್ನ ವಾಹನವನ್ನು ಉತ್ತಮ ಸ್ಥಿತಿಯಲ್ಲೇ ಹಿಂದಿರುಗಿಸಲಾಗಿದೆ ಎಂದು ತಿಳಿಸಿದ್ದಾನೆ.