ಬೆಳಗಾವಿ : ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯಕ್ಕೆ ಮುಂದಿನ ವಾರದಲ್ಲಿ ಎರಡು ಹುಲಿಗಳು ಬರಲಿವೆ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರ ಸದಸ್ಯ, ಕಾರ್ಯದರ್ಶಿ ಬಿ.ಪಿ.ರವಿ ಹೇಳಿದರು.
ನಿನ್ನೆ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಮೃಗಾಯಲಕ್ಕೆ ಭೇಟಿ ನೀಡಿ, ಮೃಗಾಲಯದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಬಳಿಕಮಾತನಾಡಿದ ಅವರು, ಈ ಮೃಗಾಲಯಕ್ಕೇ ಶೀಘ್ರವೇ ನುರಿತ ತಜ್ಞರ ತಂಡ ಭೇಟಿ ನೀಡಿ, ಇಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿ, ವರದಿ ನೀಡಿದ ನಂತರ ಎರಡು ಹುಲಿಗಳು ಇಲ್ಲಿಗೆ ಬರಲಿವೆ ಎಂದರು.
ಚಿರತೆ ತರಲು ಕೇಂದ್ರ ಮೃಗಾಲಯದಿಂದ ಅನುಮತಿ ದೊರೆಯಬೇಕಿದೆ. ಸಿಂಹಗಳನ್ನು ತರಲು ಬನ್ನೇರುಘಟ್ಟ ಮೃಗಾಲಯದ ನಿರ್ದೇಶಕರು ಅನುಮತಿ ನೀಡಿದ್ದಾರೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವರದಿ ನೀಡಬೇಕಿದೆ. ಹಂತ ಹಂತವಾಗಿ ವನ್ಯಜೀವಿಗಳನ್ನು ಚನ್ನಮ್ಮ ಮೃಗಾಲಯಕ್ಕೆ ತರಲಾಗುತ್ತದೆ ಎಂದು ಹೇಳಿದರು.
ಚನ್ನಮ್ಮ ಮೃಗಾಲಯದಲ್ಲಿ ದೊಡ್ಡ ಪ್ರಾಣಿಗಳನ್ನು ಇದೇ ಮೊದಲ ಬಾರಿಗೆ ನಿರ್ವಹಣೆ ಮಾಡಲಾಗುತ್ತಿದೆ. ಇಲ್ಲಿ 28 ಪ್ರಬೇಧಗಳ ಪ್ರಾಣಿ ಮತ್ತು ಪಕ್ಷಿಗಳಿವೆ. ಸದ್ಯಕ್ಕೆ ನೀರಿನ ಸೌಲಭ್ಯವಿದೆ. ಜಲ ಮೂಲ ಹೆಚ್ಚಳಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಕೇಳಲಾಗಿದೆ. ಇನ್ನೂ ₹6 ರಿಂದ 7ಕೋಟಿ ಅನುದಾನ ಬೇಕಿದೆ.
ಚನ್ನಮ್ಮ ಮೃಗಾಲಯದ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೋರಿ ಸಲ್ಲಿಸಲಾದ ಪ್ರಸ್ತಾವ ಹಣಕಾಸು ಇಲಾಖೆಯಲ್ಲಿದೆ. ಈ ಸಂಬಂಧ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರ ಜೊತೆಗೆ ಮಾತುಕತೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮೃಗಾಲಯದ ಮೂಲಕ ವನ್ಯಜೀವಿಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಚನ್ನಮ್ಮ ಮೃಗಾಲಯಕ್ಕೆ ಇನ್ನೂ ಹೆಚ್ಚಿನ ವನ್ಯಜೀವಿಗಳನ್ನು ಹಂತ ಹಂತವಾಗಿ ತರಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಭವಿಷ್ಯದಲ್ಲಿ ಜಿರಾಫೆ, ಜೀಬ್ರಾಗಳನ್ನು ತರಲು ಯೋಜನೆ ಹಾಕಿಕೊಳ್ಳಲಾಗಿದೆ . ಈ ಮೃಗಾಲಯ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಅಮರನಾಥ, ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ, ಜಗದೀಶ ಮಠದ ಮೊದಲಾದವರು ಉಪಸ್ಥಿತರಿದ್ದರು.