ಹುಬ್ಬಳ್ಳಿ: ನಾಮಪತ್ರ ಹಿಂದೆ ತೆಗೆದುಕೊಂಡಾಕ್ಷಣ ನನ್ನ ಧರ್ಮ ಯುದ್ಧ ನಿಂತಿಲ್ಲ. ನಾನು ಹೋರಾಟದಿಂದ ಹಿಂದೆ ಸರಿದೆ. ನಮ್ಮ ಪೀಠದ ಹಿರಿಯ ಗುರುಗಳ ಸೂಚನೆ ಮೇರೆಗೆ ಅವರ ವಾಖ್ಯ ಪರಿಪಾಲನೆಗಾಗಿ ನಾಮಪತ್ರ ಹಿಂದೆ ಪಡೆದಿದ್ದೇನೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ಹಿಂಪಡೆದಿರುವುದರ ಹಿಂದೆ ಯಾವುದೇ ಯಾರದೇ ಕೈವಾಡಗಳಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮೊದಲಿನಿಂದಲೂ ಎರಡೂ ಪಕ್ಷದ ನಾಯಕರು ನನ್ನೊಂದಿಗೆ ಸುದೀರ್ಘವಾಗಿ ಮಾತನಾಡಿದರು. ಆ ನಾಯಕರಿಗೆ ಸೂಕ್ತ ಉತ್ತರಗಳನ್ನು ನೀಡಿ ಮುಂದುವರೆದಿದ್ದೆ. ಇದೀಗ ನಮ್ಮ ಹಿರಿಯ ಗುರುಗಳು ನೀಡಿದ ಸೂಚನೆಯ ಮೇರೆಗೆ ಮಾತ್ರ ಹಿಂದೆ ಪಡೆದಿದ್ದೇನೆ. ನಾಮಪತ್ರ ಹಿಂದಕ್ಕೆ ಪಡೆದಾಕ್ಷಣ ನನ್ನ ಹೋರಾಟ ನಿಲ್ಲುವುದಿಲ್ಲ. ನಾನು ಯಾವುದೇ ಪಕ್ಷದ ಪರ ಹಾಗೂ ವಿರುದ್ಧವಿಲ್ಲ ಎಂದು ತಿಳಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು ಇಲ್ಲಿನ ಕೇಂದ್ರ ಸಚಿವರನ್ನು ನಿರಾಕರಿಸಿದ್ದರು. ಈ ಮತದಾರರ ಒತ್ತಾಯದ ಮೇರೆಗೆ ನಾವು ಧರ್ಮ ಯುದ್ಧವನ್ನು ಸಾರಿದ್ದೆವು. ಹಿಂದೆ ಹೇಳಿದಂತೆ ಧರ್ಮ ಯುದ್ಧದಲ್ಲಿ ಗೆಲ್ಲುವ ತನಕ ಮಾಲೆ ಧರಿಸುವುದಿಲ್ಲ ಎನ್ನುವುದನ್ನು ಈಗಲೂ ಮುಂದುವರಿಸುತ್ತೇನೆ ಎಂದರು.
ಸ್ಪರ್ಧೆಗಾಗಿ ಪೇಮೆಂಟ್ ಬಂದಿದೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಸಿದ ಶ್ರೀಗಳು, ಅವರೊಬ್ಬ ಬ್ರೈನ್ ಲೆಸ್ ಬಾಡಿ ಇದ್ದಂತೆ. ಅವರ ಪಕ್ಷದ ನಾಯಕರು ವಿರುದ್ಧ ಮಾತನಾಡಿದ ವ್ಯಕ್ತಿ ಇನ್ನೊಬ್ಬರ ಬಗ್ಗೆ ಮಾತನಾಡಿದರೆ ಅಚ್ಚರಿ ಪಡಬೇಕಾಗಿಲ್ಲ. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತಿರುವಾಗ ಇಂತಹ ಹೇಳಿಕೆಗಳಿಗೆ ಲಗಾಮು ಹಾಕಲು ಅವರ ನಾಯಕರಿಂದ ಸಾಧ್ಯವಾಗಿಲ್ಲ. ಇದನ್ನು ನೋಡಿದರೆ ಈ ರೀತಿ ಮಾತನಾಡಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.