ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ರಾಜ್ಯ ರಾಜಕಾರಣಕ್ಕೆ ಸಂದೇಶ ರವಾನಿಸಿದೆ. ಆದರೆ, ಈ ಚುನಾವಣೆಯಲ್ಲಿ ನನ್ನನ್ನು ಹಣಿಯಲು ಕಳ್ಳರ ಗ್ಯಾಂಗ್ ಮನೆಯಲ್ಲಿಯೇ ಕುಳಿತು ತಂತ್ರ ಮಾಡಿದೆ. ಮಾತ್ರವಲ್ಲ, ಮುಧೋಳ ಮತ್ತು ಬೆಂಗಳೂರಿನಿಂದಲೂ ಬಂದಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಈ ಹಿಂದೆ ಯಾವ ಪಕ್ಷಕ್ಕೂ 17 ಸ್ಥಾನ ಬಂದಿರಲಿಲ್ಲ. ಇದೀಗ ಹೆಚ್ಚು ಸ್ಥಾನ ಬಂದಿದ್ದು ನೋಡಿದರೆ ಜನ ಅಭಿವೃದ್ಧಿ ಮತ್ತು ಹಿಂದುತ್ವನ್ನು ಒಪ್ಪಿಕೊಂಡಿದ್ದಾರೆ ಎಂದರು.
ಈಗಾಗಲೇ ಪಕ್ಷೇತರರ ಪೈಕಿ ಓರ್ವ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಇನ್ನೂ ಇಬ್ಬರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಯಾರದೇ ಹಂಗಿಲ್ಲದೆ ಮೇಯರ್-ಉಪಮೇಯರ್ ಮಾಡುತ್ತೇವೆ. ಈ ಗೆಲುವು ರಾಜ್ಯದ ರಾಜಕಾರಣದಲ್ಲಿ ಪ್ರಭಾವ ಬೀರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುತ್ತದೆ ಎಂದರು.
ಇನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ವರ್ಚಸ್ಸು ತಗ್ಗಿಸಲು ಮನೆಯಲ್ಲಿಯೇ ಕುಳಿತು ಕುತಂತ್ರ ನಡೆಸಿದ ಗ್ಯಾಂಗ್ ಇನ್ಮುಂದೆ ಮನೆಯಲ್ಲಿಯೇ ಕುಳಿತಿರಲಿ. ಜನ ಅವರಿಗೆ ಬುದ್ಧಿ ಕಲಿಸಿದ್ದಾರೆ ಎಂದ ಯತ್ನಾಳ್, ಬೆಂಗಳೂರು, ಮುಧೋಳದಿಂದ ಯತ್ನಾಳ್ನನ್ನು ಮುಗಿಸಲು ಬಂದಿದ್ದರು. ಬೆಂಗಳೂರು, ಮುಧೋಳದಿಂದ ಸಹಾಯ ಹಸ್ತ (ಹಣ) ಕೂಡ ಬಂದಿತ್ತು. ಆದರೆ, ಜನ ಹುಚ್ಚರಲ್ಲ ಎಂದರು.