ಹಾಸನ: ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಜೀವಿತ್(29) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ.
ಈತ ತಮ್ಮದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಕಳೆದ 9 ವರ್ಷಗಳಿಂದ ಪ್ರೀತಿಸಿ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾಳೆಂದು ಯುವತಿ ವಿರುದ್ಧ ಜೀವಿತ್ ಆರೋಪಿಸಿದ್ದಾನೆ.
ಮನೆಯವರ ಒತ್ತಡದಿಂದ ಆಕೆ ತನ್ನನ್ನು ನಿರಾಕರಿಸುತ್ತಿದ್ದಾಳೆ. ಒಂಬತ್ತು ವರ್ಷಗಳಿಂದ ಆಕೆಯ ಹುಟ್ಟು ಹಬ್ಬಕ್ಕೆ ನಾನೇ ಕೇಕ್ ಕಟ್ ಮಾಡಿಸುತ್ತಿದ್ದೆ. ಆಕೆಗೆ ಮೊದಲ ಶುಭಾಶಯ ಹೇಳುತ್ತಿದ್ದದ್ದು ಕೂಡ ನಾನೇ ಎಂದಿರುವ ಜೀವಿತ್, ನಿನ್ನೆ ಹುಟ್ಟುಹಬ್ಬದಂದು ಆಕೆ ಸಿಗದಿದ್ದಕ್ಕೆ ಮನನೊಂದು ವಿಷ ಕುಡಿದಿದ್ದಾನೆ.
ಅಸ್ವಸ್ಥಗೊಂಡಿರುವ ಜೀವಿತ್ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ತನ್ನನ್ನೇ ಮದುವೆಯಾಗಬೇಕು, ಇಲ್ಲ ತನಗಾದ ಮೋಸಕ್ಕೆ ನ್ಯಾಯ ಸಿಗಬೇಕು ಎಂದು ನೊಂದ ಪ್ರೇಮಿ ಅಳಲು ತೊಡಿಕೊಂಡಿದ್ದಾನೆ.
ಒಂಬತ್ತು ವರ್ಷಗಳು ಪರಸ್ಪರ ಪ್ರೀತಿಸಿ, ಈಗ ಕೈಕೊಟ್ಟಿದ್ದಾಳೆಂದು ಯುವಕ ಆರೋಪ ಮಾಡಿದ್ದರೆ, ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದಾನೆಂದು ಆರೋಪಿಸಿ ಯುವಕನ ವಿರುದ್ದ ಯುವತಿಯ ಪಾಲಕರು ದೂರು ದಾಖಲಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ಗಂಡಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.