ಬೆಳಗಾವಿ : ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು, ದೇವರ ಬೆಳ್ಳಿ ಮೂರ್ತಿ, ಆಭರಣ, ಗಂಟೆಯನ್ನೂ ಬಿಡದೇ ಕದಿಯುತ್ತಿದ್ದ ಕಳ್ಳರ ತಂಡವೊಂದನ್ನು ಬಂಧಿಸಿರುವ ಹಾರೂಗೇರಿ ಠಾಣೆ ಪೊಲೀಸರು 25.89 ಲಕ್ಷ ರೂ. ಮೌಲ್ಯದ ಮೂರ್ತಿ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ ಅಡಳಹಟ್ಟಿಯ ವಿಜಯ ಗುಡದಿನ್ನಿ, ಕಲ್ಮೇಶ ಮೂರಾಬಟ್ಟಿ, ಶಿವಾನಂದ ಚಿಕ್ಕಟ್ಟಿ, ಸಂಗಮೇಶ ಐನಾಪೂರ ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಲಾಗಿದೆ. ಇವರಿಂದ 1.30 ಲಕ್ಷ ರೂ. ಮೌಲ್ಯದ 11.5 ಗ್ರಾಂ ಚಿನ್ನ, 18.23 ಲಕ್ಷ ರೂ. ಮೌಲ್ಯದ 7.760 ಕೆಜಿ ಚಿನ್ನ, 35,695ರೂ. ಮೌಲ್ಯದ 29.500 ಕೆಜಿ ಕಂಚಿನ ಆಭರಣ, 6 ಲಕ್ಷ ರೂ. ಮೌಲ್ಯದ ಮಹಿಂದ್ರಾ ಪಿಕಪ್ ವಾಹನ ಜಪ್ತಿ ಮಾಡಲಾಗಿದೆ. ಹಾರೂಗೇರಿ, ಅಥಣಿ, ಕಾಗವಾಡ ಮತ್ತು ಲೋಕಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ ಕಲ್ಮೇಶ ಗಡಿಪಾರು ಶಿಕ್ಷೆಗೊಳಗಾಗಿದ್ದನು. ನ್ಯಾಯಾಲಯದಿಂದ ತಡೆ ತಂದು, ಅದರಿಂದ ಪಾರಾಗಿ ಪುನಃ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಮಾಹಿತಿ ನೀಡಿದರು.
ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯ ತೋಲಗಿಯಲ್ಲಿ ಚರಂಡಿಗೆ ನೀರು ಬಿಡುವ ವಿಷಯದ ಜಗಳದ ಅಮೀರಸಾಬ ಪಾಶ್ಚಾಪೂರ ಕೊಲೆ ಪ್ರಕರಣದಲ್ಲಿ ಪಕ್ಕದ ಮನೆಯ ಅಶೋಕ ಉಗರಖೋಡನನ್ನು ಬಂಧಿಸಲಾಗಿದೆ. ಈ ಜಗಳದಲ್ಲಿ ಭಾಗಿಯಾಗಿದ್ದ ರೇಣುಕಾ ಉಗರಖೋಡ, ಅಶ್ವಿನಿ ಉಗರಖೋಡ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಕಳೆದ ಮೇನಲ್ಲಿ ಹುಕ್ಕೇರಿ ತಾಲೂಕಿನ ಕಣಗಲಾ ಬಳಿ ಕೊಲ್ಲಾಪುರ ಜಿಲ್ಲೆ ಉಚಗಾವಿಯ ಬೇಬಿ ಶೇಖ್(59) ಶವ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಪರಿಚಯಸ್ಥ ಹಾಜಿಮಸ್ತಾನ ಭಾಗವಾನನನ್ನು ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಬೇಬಿ 1.30 ಲಕ್ಷ ರೂ. ಹಣ ಹಣ ಕೊಟ್ಟಿದ್ದಳು. ಇದನ್ನು ಮರಳಿ ಕೇಳುತ್ತಿದ್ದರಿಂದ ಆಕೆಗೆ ನೀರಿನಲ್ಲಿ ವಿಷ ಬೆರಿಸಿ ಕುಡಿಸಿ, ಶವ ಎಸೆದು ಹೋಗಿದ್ದನು ಎಂದು ವಿವರಿಸಿದರು.
Laxmi News 24×7