ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಗುರುವಾರ ಒಂದೇ ದಿನ ಏಳು ಮಂದಿಗೆ ಕಿಲ್ಲರ್ ಕೊರೊನಾ ದೃಢವಾಗಿದೆ.
ಶಿವಾಜಿನಗರದಲ್ಲಿ ನಾಲ್ವರಿಗೆ, ಪಾದರಾಯನಪುರದಲ್ಲಿ ಇಬ್ಬರಿಗೆ ಮತ್ತು ಯಶವಂತಪುರದಲ್ಲೂ ಓರ್ವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಪಾದರಾಯನಪುರದಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕುತ್ತಿದೆ. ಪಾದಾರಾಯನಪುರದಲ್ಲಿ 35 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕನಿಗೆ ಡೆಡ್ಲಿ ವೈರಸ್ ದೃಢವಾಗಿದೆ.
ಬೇರೆ ಬೇರೆ ಮನೆಗಳಲ್ಲಿ ಇದ್ದ ಈ ಇಬ್ಬರಿಗೆ ಸೋಂಕು ಬಂದಿದ್ದು, ರ್ಯಾಂಡಮ್ ಟೆಸ್ಟ್ನಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ. ಇಬ್ಬರು ಸೋಂಕಿತನ ಮನೆ ಸುತ್ತ ಓಡಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಇಬ್ಬರ ಸೋಂಕಿನ ಮೂಲ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿಗಳಿಗಾಗಿ ಆರೋಗ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.
ಸೊಂಕು ಬಂದ ಮಹಿಳೆ ಯಾರು ಗೊತ್ತಾ?
ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಪುಂಡಾಟಿಕೆ ಮಾಡಿದ ವ್ಯಕ್ತಿಯ ಪತ್ನಿ 35 ವರ್ಷದ ಮಹಿಳೆಗೆ ಈಗ ಸೋಂಕು ಬಂದಿರುವುದು. ಪಾದರಾಯನಪುರದ ಪುಂಡಾಟಿಕೆಯಲ್ಲಿ ಈಕೆಯ ಪತಿ ಅರೆಸ್ಟ್ ಆಗಿದ್ದಾನೆ. ಮಹಿಳೆ ಪಾದರಾಯನಪುರದ 10 ಕ್ರಾಸ್ನಲ್ಲಿ ವಾಸಿಸುತ್ತಿದ್ದು, ಆಶಾ ಕಾರ್ಯಕರ್ತೆಯರು ಹೋದಾಗ ರಾತ್ರೋರಾತ್ರಿ ದಬ್ಬಾಳಿಕೆ ಮಾಡಿದ್ದು ಈ ಮಹಿಳೆಯ ಪತಿ ಆಗಿದ್ದಾನೆ. ಮಹಿಳೆ ಪತಿ ಈಗ ಅರೆಸ್ಟ್ ಆಗಿ ಹಜ್ ಭವನದಲ್ಲಿ ಕ್ವಾರಂಟೈನ್ನಲ್ಲಿ ಇದ್ದಾನೆ.
ಈಗ ಈಕೆಗೆ ರ್ಯಾಂಡಮ್ ಟೆಸ್ಟ್ನಲ್ಲಿ ಸೊಂಕು ಪತ್ತೆಯಾಗಿದೆ. ಈಗ ಪತಿಗೂ ಸೋಂಕು ಇದಿಯಾ ಅಂತ ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದ್ದು, ಆತನನ್ನು ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ.
ಪಾದರಾಯನಪುರದ ಡೇಂಜರ್ ಕ್ರಾಸ್:
ಎರಡು ಹೊಸ ಪಾಸಿಟಿವ್ ಕೇಸ್ಗಳಿಗೂ 4 ಕ್ರಾಸ್ ನಂಟು ಇದ್ದು, ಪಾದರಾಯನಪುರದಲ್ಲಿ ಇದುವರೆಗೂ 37 ಮಂದಿಗೆ ಕೊರೊನಾ ವೈರಸ್ ಬಂದಿದೆ. ಪಾದರಾಯನಪುರದಲ್ಲಿ 8ನೇ ಕ್ರಾಸ್, 9ನೇ ಕ್ರಾಸ್, 10ನೇ ಕ್ರಾಸ್, 11ನೇ ಕ್ರಾಸ್ ಈ ನಾಲ್ಕು ಡೇಂಜರ್ ಏರಿಯಾಗಳಾಗಿದ್ದು, ಈ ನಾಲ್ಕು ಕ್ರಾಸ್ಗಳಲ್ಲಿ ಓಡಾಡುವ ಜನರು ಜಾಗೃತವಾಗಿರಬೇಕು. ಈ ಕ್ರಾಸ್ಗಳಲ್ಲೇ ಹೆಚ್ಚು ರ್ಯಾಂಡಮ್ ಟೆಸ್ಟ್ ನಡೆದಿದೆ. ಇದೇ ರಸ್ತೆಗಳಲ್ಲಿ ಪುಂಡರು ಗಲಭೆ ಕೂಡ ಮಾಡಿದ್ದರು.
ಅಲ್ಲದೇ ಈ ಕ್ರಾಸ್ಗಳಲ್ಲಿ ಓಡಾಡಿದ 250ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ನಿನ್ನೆ ಪತ್ತೆಯಾದ ಸೋಂಕಿತರು ಕೂಡ ಇದೇ ಕ್ರಾಸ್ನಲ್ಲಿ ಓಡಾಡಿದ್ದರು. ಸೋಂಕಿತರು 9 ಮತ್ತು 10ನೇ ಕ್ರಾಸ್ನಲ್ಲಿ ಓಡಾಡಿದ್ದರು. ಹೀಗಾಗಿ ಜನರು ಎಚ್ಚರವಾಗಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.