ಬೆಂಗಳೂರು: ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಇಂಡ್ಲವಾಡಿ ರಸ್ತೆಯ ಸ್ಟ್ರೈಡ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಇಂಡ್ಲವಾಡಿ ಮೂಲದ ಮಂಜುಳಾ (26) ಮೃತ ಮಹಿಳೆ. ಮೃತ ಮಂಜುಳಾ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಬಂದಿದ್ದು, ನಂತರ ಸಾವನ್ನಪ್ಪಿದ್ದಾಳೆಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹದಿನೈದು ದಿನ ವಿತರಣೆ ಪಾಳಿಯಂತೆ ರಜೆಯಲ್ಲಿದ್ದು, ಬುಧವಾರ ಕೆಲಸಕ್ಕೆ ಹಾಜರಾಗಿದ್ದಳು. ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದ ಮಂಜುಳಾ ಆರೋಗ್ಯವಾಗಿದ್ದಳು. ಅಲ್ಲದೇ ಕೊರೊನಾ ನಿಯಮದಂತೆ ಪ್ರತಿ ಕಾರ್ಮಿಕರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಮಂಜುಳಾ ಪರೀಕ್ಷೆಗೆ ಒಳಗಾಗಿ ಆರೋಗ್ಯ ಪೂರ್ವಕವಾಗಿಯೇ ಕೆಲಸಕ್ಕೆ ಹಾಜರಾಗಿದ್ದಳು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಕೆಲಸ ಮಾಡುವ ಸಂದರ್ಭದಲ್ಲಿ ಒಬ್ಬಂಟಿಯಾಗಿ ಪಕ್ಕಕ್ಕೆ ತೆರಳಿ ಕುಳಿತುಕೊಂಡಿದ್ದಳು. ಆದರೆ ಮಂಜುಳಾ ಕುಳಿತಯಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ. ಇದೀಗ ಸ್ಥಳಕ್ಕೆ ಆಗಮಿಸಿದ ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.