ಹುಬ್ಬಳ್ಳಿ: ಮೂರನೇ ಹಂತದ ಲಾಕ್ಡೌನ್ ವಿಸ್ತರಣೆಯಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿದ್ದು, ಆಟೋ ಸಂಚಾರಕ್ಕೆ ಮಾತ್ರ ಅನುಮತಿ ನೀಡಿಲ್ಲ. ಆದರೂ ಕೂಡ ಅನಗತ್ಯವಾಗಿ ರಸ್ತೆಗೆ ಇಳಿಯುವ ಆಟೋಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುರೇಂದ್ರ ಹೊಳೆಣ್ಣವರ ನೇತೃತ್ವದಲ್ಲಿಂದು ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಆಟೋಗಳಿಗೆ ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಈಗಾಗಲೇ ಸುಮಾರು ಆಟೋಗಳನ್ನು ಸೀಜ್ ಮಾಡಿ ಈದ್ಗಾ ಮೈದಾನದಲ್ಲಿ ನಿಲ್ಲಿಸಲಾಗಿದೆ. ಈಗಾಗಲೇ ಸರ್ಕಾರ ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು ಕೂಡ ಆಟೋ ಚಾಲಕರು ಮಾತ್ರ ಯಾವುದೇ ರೀತಿಯ ನಿಯಮ ಪಾಲಿಸದೇ ರಸ್ತೆಗೆ ಇಳಿದಿದ್ದು, ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಆಟೋ ಚಾಲಕರ ಹಾಗೂ ಮಾಲೀಕರ ಹಿತಾಸಕ್ತಿ ಕಾಪಾಡುವ ಸದುದ್ದೇಶದಿಂದ ಐದು ಸಾವಿರ ಧನಸಹಾಯ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಲಾಕ್ಡೌನ್ ಸಡಿಲಿಕೆ ಮಾಡಿದೆ ಎಂದು ಯಾವುದೇ ಆಟೋ ಚಾಲಕರು ಆಟೋಗಳನ್ನು ತೆಗೆದುಕೊಂಡು ಮಹಾನಗರದಲ್ಲಿ ಬೇಕಾಬಿಟ್ಟಿ ಸಂಚರಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.
Laxmi News 24×7