ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಿಂದೂ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರ ವಿರುದ್ಧ ಸಮರ ಸಾರಿದ್ದ ಬಿಜೆಪಿ, ಹಿಂದೂಪರ ಸಂಘಟನೆಗಳ ವಿರುದ್ಧ ಇಂದು ಸತೀಶ ಬೆಂಬಲಿಗರು, ವಿವಿಧ ದಲಿತ ಸಂಘಟನೆಗಳು ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದವು. ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ನಾವೆಲ್ಲಾ ಸತೀಶ ಜಾರಕಿಹೊಳಿ ಅವರ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿದ್ದಾರೆ.
ಹೌದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹಿಂದೂ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದ ಬಿಜೆಪಿ ನಾಯಕರ ವಿರುದ್ಧ ಸತೀಶ ಜಾರಕಿಹೊಳಿ ಅಭಿಮಾನಿಗಳು ಅಕ್ಷರಶಃ ರೊಚ್ಚಿಗೆದ್ದಿದ್ದರು. ಸತೀಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿ ಬೆಳಗಾವಿಯ ಸಿಪಿಎಡ್ ಮೈದಾನದಿಂದ ಸತೀಶ ಅಭಿಮಾನಿಗಳು, ವಿವಿಧ ದಲಿತ ಸಂಘಟನೆಗಳು ಬೃಹತ್ ರ್ಯಾಲಿ ಆರಂಭಿಸಿದರು. ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಕೈಯಲ್ಲಿ ಸತೀಶ ಪರ ಭಿತ್ತಿ ಫಲಕಗಳನ್ನು ಹಿಡಿದುಕೊಂಡು ಮನುವಾದಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿ ಇನ್ನಿತರ ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಏಟು ಕೊಟ್ಟು ಪ್ರತಿಕೃತಿ ದಹನ ಮಾಡಿದರು.
ಇನ್ನು ಪ್ರತಿಭಟನಾ ರ್ಯಾಲಿಯಲ್ಲಿ ಕೇಸರಿ, ನೀಲಿ, ಕನ್ನಡ ಬಾವುಟ ಬಣ್ಣದ ಶಾಲು ಧರಿಸಿ ಸತೀಶ ಅಭಿಮಾನಿಗಳು ಭಾಗಿಯಾಗಿದ್ದರು. ವೀರರಾಣಿ ಚನ್ನಮ್ಮಾಜಿ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೂ ಈ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಗೋಕಾಕ್ನಲ್ಲಿ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸತೀಶ ಅಭಿಮಾನಿಗಳು ಯತ್ನಾಳ ವಿರುದ್ಧ ಅಶ್ಲೀಲ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ರವೀಂದ್ರ ನಾಯಿಕ್ ಮಾತನಾಡಿ ಸತೀಶ ಜಾರಕಿಹೊಳಿ ದಲಿತರು, ಶೋಷಿತ ವರ್ಗದಿಂದ ಬಂದವರು. ಶೋಷಿತರು, ಬಡವರ ಪರವಾಗಿ ಧ್ವನಿ ಎತ್ತುತ್ತಿರುವ ಇವರ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಆ ಹೇಳಿಕೆಯನ್ನು ತಿರುಚಿ, ಇಡೀ ರಾಜ್ಯ, ದೇಶಾಧ್ಯಂತ ಅಪಪ್ರಚಾರ ಮಾಡಿ ಅವರ ತೇಜೋವಧೆ ಮಾಡುವ ಮನುವಾದಿಗಳ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಮತ್ತು ಅದನ್ನು ಧಿಕ್ಕರಿಸುತ್ತೇವೆ. ಭಗವಾನ್ ಬುದ್ಧನ ದೇಶದಿಂದ ಓಡಿಸಿದವರು, ಕಲ್ಯಾಣ ಕ್ರಾಂತಿ ನಂತರ ಅಣ್ಣ ಬಸವಣ್ಣನವರನ್ನು ಗಡಿಪಾರು ಮಾಡಿದ್ದು ಅಷ್ಟೇ ಅಲ್ಲದೇ ಲಕ್ಷಾಂತರ ಶರಣರನ್ನು ಕಗ್ಗೊಲೆ ಮಾಡಿದವರು. ಅಂಬೇಡ್ಕರ್ ಅವರು ಹುಟ್ಟಿದಾಗಿನಿಂದ ಸಾಯೋವರೆಗೂ ಅವರು ಧರ್ಮವನ್ನು ಬಿಟ್ಟು ಹೋಗೋವರೆಗೂ ನಿರಂತರವಾಗಿ ನೋವು, ಅಪಮಾನ ಮಾಡಿದ ಸಿದ್ಧಾಂತವಿದು. ಅವರ ಸಿದ್ಧಾಂತದ ವಿರುದ್ಧ ಯಾರೇ ಮಾತನಾಡಿದರೂ ಷಡ್ಯಂತ್ರ ಮಾಡಿ ಅವರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಪ್ರಯತ್ನ ದೇಶದಲ್ಲಿ ನಡೆದಿದೆ. ಹಿಂದುಳಿದ ಜನ ನಾವು ಜಾಗೃತರಾಗಿದ್ದೇವೆ. ನಿಮ್ಮ ವಿರುದ್ಧದ ಹೋರಾಟವನ್ನು ನಾವು ಇಲ್ಲಿಗೆ ನಿಲ್ಲಿಸೋದಿಲ್ಲ ಎಂದು ಎಚ್ಚರಿಸಿದರು.