ಧಾರವಾಡ(ಜು.20): ರಾಜ್ಯಾದ್ಯಂತ ಒಳ್ಳೆ ಮಳೆಯಾಗಿರೊ ಕಾರಣ ಹಳ್ಳಕೊಳ್ಳ ಕೆರೆಗಳೆಲ್ಲ ತುಂಬಿ ಭರ್ತಿಯಾಗಿವೆ. ಇದರಿಂದ ರೈತರಿಗಷ್ಟೆ ಅಲ್ಲ ಮೀನುಗಾರರಿಗೂ ಸಂತಸ ತಂದಿದೆ. ಆದ್ರೆ ಇಲ್ಲೊಂದು ಗ್ರಾಮದದಲ್ಲಿ ಏಕಾಏಕಿಯಾಗಿ ಆ ಕೆರೆಯಲ್ಲಿನ ಮೀನುಗಳ ಮಾರಣಹೋಮ ಶುರುವಾಗಿದ್ದು, ರಾಶಿ ರಾಶಿ ಮೀನುಗಳು (Fish) ಸತ್ತು ದಂಡೆಗೆ ಬಂದು ಬೀಳುತ್ತಿವೆ.
ಗ್ರಾಮಸ್ಥರು ಕೆರೆಯ ಸಮೀಪ ಹೋಗೋದಕ್ಕೂ ಭಯಪಡುತ್ತಿದ್ದಾರೆ. ಹೌದು ಧಾರವಾಡ (Dharawad) ಜಿಲ್ಲೆಯ ನರೇಂದ್ರ ಗ್ರಾಮದಲ್ಲಿರೋ ಸುಮಾರು 82 ಎಕರೆ ವಿಸ್ತೀರ್ಣದ ಹಿರೇಕೆರೆಯ ದುಸ್ಥಿತಿ. ಅಷ್ಟಕ್ಕೂ ಈ ಕೆರೆಗೆ ಯಾರೂ ಏನು ಮಾಡಿಲ್ಲ.
ಆದ್ರೆ ಕೆರೆಯ ಮೇಲ್ಬಾಗದ ಕೂಗಳತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಂ. 4 ಹಾಯ್ದು ಹೋಗಿದ್ದು, ವಾರದ ಹಿಂದೆ ಕೆಮಿಕಲ್ ಟ್ಯಾಂಕರ್ (Chemical Tanker) ವೊಂದು ಪಲ್ಟಿಯಾಗಿತ್ತು. ಆಗ ಸೋರಿಕೆಯಾಗಿದ್ದ ಕೆಮಿಕಲ್ ಹಳ್ಳದ ಮೂಲಕ ಕೆರೆಗೆ ಬಂದು ಸೇರಿ ಈ ಅವಾಂತರ ಸೃಷ್ಟಿಯಾಗಿದೆ.
ಇನ್ನು ಈ ಕೆರೆಯಲ್ಲಿ ಮೀನುಗಾರರ ಸಂಘದವರು ನಾಲ್ಕುವರೆ ಲಕ್ಷದಷ್ಟು ಮೀನು ಮರಿಗಳನ್ನು ಬಿಟ್ಟಿದ್ದರು. ಎರಡು ವರ್ಷಗಳಿಂದ ಮೀನು ಹಿಡಿಯದೇ ಬಿಟ್ಟಿದ್ದರು. ಹೀಗಾಗಿ ಮೀನುಗಳ ಚೆನ್ನಾಗಿಯೇ ಬೆಳೆದಿದ್ದವು. ಮೊನ್ನೆ ಕೆರೆಗೆ ಬಾಗಿನ ಅರ್ಪಿಸಿದ ಹಿನ್ನೆಲೆಯಲ್ಲಿ ಈ ವಾರದಲ್ಲಿ ಮೀನುಗಳನ್ನು ಸೆರೆ ಹಿಡಿದು ಮಾರುಕಟ್ಟೆಗರ ಸಾಗಿಸೋ ಪ್ಲ್ಯಾನ್ ಸಹ ಮಾಡಿದ್ದರು.
ಕೆರೆ ಸಮೀಪಕ್ಕೆ ಹೋಗಲು ಭಯಪಡುತ್ತಿದ್ದಾರೆ ಜನ
ಆದ್ರೆ ಏಕಾಏಕಿಯಾಗಿ ಮಳೆ ಸುರಿಯುತ್ತಿರೋವಾಗಲೇ ಟ್ಯಾಂಕರ್ ಪಲ್ಟಿಯಾಗಿತ್ತು. ಆಗ ಯಾವುದೇ ಅನಾಹುತ ಆಗಿರಲೇ ಇಲ್ಲ. ಹೀಗಾಗಿ ಯಾರೂ ಅಪಘಾತ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ಮಳೆ ನೀರಿನಿಂದ ಹೀಗೆ ಕೆಮಿಕಲ್ ಸೇರಿ ಸಾವಿರಾರು ಮೀನುಗಳು ಸತ್ತು ಬಿದ್ದ ಬಳಿಕ ಗ್ರಾಮಸ್ಥರು ಕೆರೆ ಸಮೀಪ ಹೋಗೋದಕ್ಕೂ ಹೆದರುತ್ತಿದ್ದಾರೆ.