ಬೆಂಗಳೂರು: ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ. ಬೇರೆ ಪಕ್ಷಗಳೊಂದಿಗೂ ಚುನಾವಣಾ ಪೂರ್ವ ಹೊಂದಾಣಿಕೆ ಇಲ್ಲ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಅವಧಿ ಪೂರ್ವ ಚುನಾವಣೆ ನಡೆಯಲ್ಲ. ಇದಕ್ಕೆ ಕಾರಣವನ್ನು ಕರೆ ಮಾಡಿ ತಿಳಿಸುವುದಾಗಿ ಅಮಿತ್ ಶಾ ಹೇಳಿರುವುದು ತಿಳಿದುಬಂದಿದೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಿನ್ನೆ (ಏಪ್ರಿಲ್ 01) ನಡೆದ ಸಭೆಯಲ್ಲಿ ಅಮಿತ್ ಶಾ ಹೀಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಮಾತುಗಳು ಕೇಳಿಬರುತ್ತಿವೆ. ಇದು ನಿಜವೇ ಎಂದು ಕೋರ್ ಕಮಿಟಿಯ ಸದಸ್ಯರು ಕೇಳಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಅಮಿತ್ ಶಾ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ನವೆಂಬರ್, ಡಿಸೆಂಬರ್ನಲ್ಲಿ ಗುಜರಾತ್ ಚುನಾವಣೆ ಮಾತ್ರ ಇದೆ. ಮುಂದಿನ ವರ್ಷ ಮೇನಲ್ಲಿ ಕರ್ನಾಟಕ ಚುನಾವಣೆ ಮಾತ್ರ ಇದೆ. ಗುಜರಾತ್, ಕರ್ನಾಟಕ ಚುನಾವಣೆ ಮಧ್ಯೆ ಸಮಯ ಹೆಚ್ಚಿದೆ. ಈ ನಡುವೆ ಮತ್ತೊಂದು ಜನಪ್ರಿಯ ಬಜೆಟ್ ಕೂಡ ನೀಡಬಹುದು. ಪಕ್ಷ ಸಂಘಟನೆ ಮಾಡುವುದಕ್ಕೆ ನಿಮಗೆ ಬೇಕಾದಷ್ಟು ಸಮಯವಿದೆ. ಹೀಗಾಗಿ ಬೇರೆ ಪಕ್ಷದ ಜತೆ ಹೊಂದಾಣಿಕೆ ಕೇವಲ ಗಾಳಿ ಸುದ್ದಿ. ದೆಹಲಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಆತಂಕ ಬೇಡ ಎಂದು ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ತಿಳಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.