ಲಕ್ಷ್ಮೇಶ್ವರ: ಪ್ರಸ್ತುತ ಮಾರುಕಟ್ಟೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿ ಬಾಳೆ ಬೆಳೆದ ರೈತರ ಬದುಕು ಬೀದಿಗೆ ಬಿದ್ದಿದೆ. ಬೆಳೆದ ಹಣ್ಣನ್ನು ತಾವೇ ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.
ಒಣ ಬೇಸಾಯದಿಂದ ಕೈ ಸುಟ್ಟುಕೊಳ್ಳುತ್ತಿರುವ ರೈತರು ತೋಟಗಾರಿಕೆಯತ್ತ ಚಿತ್ತ ಹರಿಸಿ ಲಾಭದಾಯಕ ಬೆಳೆಗಳನ್ನು ಬೆಳೆದು ಒಂದಿಷ್ಟು ಆರ್ಥಿಕ ಸುಧಾರಣೆಯ ಯೋಜನೆ, ಕನಸುಗಳನ್ನುರೈತರು ಕಾಣುತ್ತಿದ್ದಾರೆ. ತೋಟಗಾರಿಕೆಯಲ್ಲಿ ಬಾಳೆ,ದಾಳಿಂಬೆ, ದ್ರಾಕ್ಷಿ, ಕಬ್ಬು, ಅಡಕೆ, ಮಾವು, ಚಿಕ್ಕು ಸೇರಿಕೆಲ ಅಗ್ರಪಂಕ್ತಿಯ ಬಹು ವಾರ್ಷಿಕ, ಮಿಶ್ರ ಬೆಳೆ ಬೆಳೆಯಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಆದರೆ ಕಳೆದ 2 ವರ್ಷದಿಂದ ಕೋವಿಡ್, ಅತಿವೃಷ್ಟಿ ಇತರೇ ಕಾರಣದಿಂದ ತೋಟಗಾರಿಕಾಬೆಳೆಗಾರರರೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಸದ್ಯ ನೆಚ್ಚಿದ ಬಾಳೆ ಬೆಳೆ ಬೆಲೆ ಕುಸಿತದಿಂದ ರೈತರ ಪರಿಸ್ಥಿತಿ ಅಯೋಮಯವಾಗಿದೆ.
ಮೊದಲು ಪ್ರತಿ ಕ್ವಿಂಟಲ್ ಬಾಳೆ 600 ರಿಂದ 800 ರೂ. ವರೆಗೂ ಮಾರಾಟವಾಗುತ್ತಿತ್ತು. ಕಳೆದ 6 ತಿಂಗಳಿಂದ ಪ್ರತಿ ಕ್ವಿಂಟಲ್ ಬಾಳೆ 300 ರಿಂದ 400 ರೂ. ಮಾತ್ರಮಾರಾಟವಾಗುತ್ತಿದೆ. ಅತಿಯಾದ ಮಳೆಯಿಂದಇಳುವರಿ ಕುಂಠಿತವಾಗಿದ್ದು, ನಿರ್ವಹಣೆ, ಕೂಲಿ ಆಳು, ಸಾಗಾಣಿಕೆ ವೆಚ್ಚ ಲೆಕ್ಕ ಹಾಕಿದರೆ ಬಾಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಲದಲ್ಲಿಯೇ ಬಿಟ್ಟರೆ ಕೊಳೆತು ಹೋಗುತ್ತದೆ ಎಂಬ ಕಾರಣದಿಂದ ಬೆಳೆಗಾರರೇ ಖರೀದಿದಾರರಿಗೆಒತ್ತಾಯಪೂರ್ವಕವಾಗಿ ಉದ್ರಿ ಮಾರಾಟ ಮಾಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮಾರಾಟ ಮಾಡಿ ಹೋದ ಮೇಲೆ ವ್ಯಾಪಾರಸ್ಥರುರೈತರಿಗೆ ಹಣ ಕೊಡಲು ಸತಾಯಿಸುತ್ತಿರುವ ಬಗ್ಗೆ ಕೇಳಿ ಬರುತ್ತಿವೆ.
ಟ್ರ್ಯಾಕ್ಟರ್ನಲ್ಲಿ ಮಾರಾಟಕ್ಕೆ ಮುಂದಾದ ರೈತರು: ಶಿರಹಟ್ಟಿ ತಾಲೂಕಿನ ಹಾಲಪ್ಪ ಬಡ್ನಿ, ಲಕ್ಷ್ಮಮ್ಮ ಬಡ್ನಿ, ಮಲ್ಲಪ್ಪ ಉಡಚಣ್ಣವರ ರೈತ ಕುಟುಂಬದವರು ತಾವೇ ಸ್ವತಃ ಕಟಾವು ಮಾಡಿ, ಸಾವಯವ ಪದ್ಧತಿಯಲ್ಲಿ ಹಣ್ಣು ಮಾಗಿಸಿ ಟ್ರ್ಯಾಕ್ಟರ್ನಲ್ಲಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಕಳೆದ ಕೆಲ ದಿನಗಳಿಂದ ಲಕ್ಷ್ಮೇಶ್ವರ, ಬೆಳ್ಳಟ್ಟಿ, ಶಿರಹಟ್ಟಿ ಸೇರಿ ದೊಡ್ಡ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ. ಈ ಕೆಲಸ ಹೆಚ್ಚಿನ ಲಾಭಕ್ಕೆ ಬದಲಾಗಿ ಜೀವನ ನಿರ್ವಹಣೆ ಮತ್ತು ಉಂಟಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ. 2 ಎಕರೆ ತೋಟದಲ್ಲಿನ ಬೆಳೆ ಸದ್ಯದ ದರಕ್ಕೆ ಮಾರಾಟ ಮಾಡಿದರೆ ಮಾಡಿದ ಖರ್ಚು ಕೂಡ ಸರಿದೂಗದು. ಖರ್ಚು ವೆಚ್ಚ ಸರಿದೂಗಿ ನಿತ್ಯದ ಜೀವನ ನಡೆದರೆ ಸಾಕು ಎನ್ನುವ ಉದ್ದೇಶದಿಂದ ನಾವೇ ಕುಟುಂಬದವರೆಲ್ಲ ಊರೂರು ಸುತ್ತಿ ಡಜನ್ಗೆ 15 ರಿಂದ 20 ರೂ.ವರೆಗೆ ಹಣ್ಣು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ರೈತ ಕುಟುಂಬದವರು.
ತೋಟಗಾರಿಕೆ ಇಲಾಖೆ ಮಾಹಿತಿಯ ಪ್ರಕಾರ ರಾಷ್ಟ್ರೀಯ ತೋಟಗಾರಿಕಾ ಮಿಶನ್ ಮತ್ತು ರಾಷ್ಟ್ರೀಯ ಸಮಗ್ರ ಬೆಳೆ ಯೋಜನೆಯಡಿ ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ ಉಂಡೇನಹಳ್ಳಿ, ಮುನಿಯನ ತಾಂಡಾ, ಶೆಟ್ಟಿಕೇರಿ, ಸೂರಣಗಿ, ದೊಡ್ಡೂರ, ಬನ್ನಿಕೊಪ್ಪ, ವಡವಿ, ಹೊಸೂರ, ತಾರಿಕೊಪ್ಪ, ಬೆಳ್ಳಟ್ಟಿ, ಕಡಕೋಳ ಸೇರಿ ಸುಮಾರು 350 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಬೆಲೆ ಕುಸಿತದಿಂದಾಗಿ ಬಾಳೆ ಕಟಾವು ಮಾಡದ್ದರಿಂದ ಗೊನೆಗಳಲ್ಲಿಯೇ ಹಣ್ಣುಗಳಾಗಿ ತೋಟದ ತುಂಬೆಲ್ಲ ಕೊಳತು ಬಿದ್ದಿರುವ ದೃಶ್ಯ ಎಂತಹವರನ್ನೂ ಮಮ್ಮಲ ಮರಗಿಸುವಂತಿದೆ.