ಚಿಕ್ಕೋಡಿ: ಹಾವು ಕಚ್ಚಿ ತಂದೆ-ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಲ್ಲಿಕಾರ್ಜುನ್ ಮುತ್ತಪ್ಪ ಕುಂಬಾರ (14) ಹಾಗೂ ಮುತ್ತಪ್ಪ ಬಾಳಪ್ಪ ಕುಂಬಾರ (40) ಮೃತ ದುರ್ದೈವಿಗಳು. ಕಳೆದ ಆಗಸ್ಟ್ 29 ರಂದು ಹಾವು ಕಚ್ಚಿತ್ತು. ಪರಿಣಾಮ ಆಗಸ್ಟ್ 31 ರಂದು ಮಲ್ಲಿಕಾರ್ಜುನ್ ಮುತ್ತಪ್ಪ ಕುಂಬಾರ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 2 ರಂದು ಮುತ್ತಪ್ಪ ಬಾಳಪ್ಪ ಕುಂಬಾರ ಮೃತಪಟ್ಟಿದ್ದಾನೆ ಅಂತಾ ವರದಿಯಾಗಿದೆ.
ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಪ್ಪ ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯ ವಿವರ:
ಕಳೆದ ಆಗಸ್ಟ್ 29ರಂದು ನಸುಕಿನ ಜಾವ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದಾಗ ಇಬ್ಬರಿಗೂ ಹಾವು ಕಚ್ಚಿದೆ. ಕತ್ತಲು ಇರೋದ್ರಿಂದ ಇರುವೆ ಅಥವಾ ಇನ್ನೇನೋ ಕಡಿದಿರಬಹುದು ಎಂದು ಭಾವಿಸಿದ್ದಾರೆ. ಮುಂಜಾನೆ ಹೊತ್ತಿಗೆ ತೀವ್ರ ಅಸ್ವಸ್ಥ ಆಗಿದ್ದರಿಂದ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಒಬ್ಬರಂತೆ ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನಲ್ಲಿ ನಡೆದಿದೆ. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ