ದಾವಣಗೆರೆ: ಪೆಟ್ರೋಲ್, ಡೀಸೆಲ್ ಖರೀದಿಸಲು ಬ್ಯಾಂಕ್ಗಳು ಸಾಲ ನೀಡಬೇಕು ಎಂದು ಭಾರತೀಯ ಯುವ ಕಾಂಗ್ರೆಸ್ ಇಲ್ಲಿನ ಮಂಡಿಪೇಟೆಯ ಕೆನರಾ ಬ್ಯಾಂಕ್ ಮುಂದೆ ಆಗ್ರಹಿಸಿತು.
ಯುವ ಕಾಂಗ್ರೆಸ್ ವಕ್ತಾರ ಎಚ್.ಜೆ. ಮೈನುದ್ದೀನ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಪ್ರದರ್ಶಿಸಿ ಸಾಲ ನೀಡುವಂತೆ ಒತ್ತಾಯಿಸಿದರು.
‘ಲಾಕ್ಡೌನ್ನಿಂದಾಗಿ ಅಂಗಡಿಗಳು ಬಂದ್ ಆಗಿವೆ. ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ.ಪೆಟ್ರೋಲ್ ದರ ಒಂದು ಲೀಟರ್ಗೆ ₹ 100, ಡೀಸೆಲ್ ದರ ಒಂದು ಲೀಟರ್ಗೆ ₹ 90ರ ಗಡಿ ದಾಟಿದೆ. ₹ 40 ಸಾವಿರದಿಂದ ₹ 50 ಸಾವಿರ ಮೊತ್ತದ ದ್ವಿಚಕ್ರ ವಾಹನ ಖರೀದಿಸಲು ಸಾಲ ನೀಡುವ ಬ್ಯಾಂಕ್ಗಳು, ವಾಹನಗಳ ದಾಖಲೆಗಳನ್ನು ಭದ್ರತೆಯಾಗಿಟ್ಟುಕೊಂಡು ಪೆಟ್ರೋಲ್, ಡೀಸೆಲ್ ಖರೀದಿಗೆ ಸಾಲ ನೀಡಬೇಕು’ ಎಂದು ಮೈನುದ್ದೀನ್ ಆಗ್ರಹಿಸಿದರು.
‘ಪ್ರತಿ ನಿತ್ಯ 100 ಕಿ.ಮೀ ಗಾಡಿ ಓಡಿಸುವ ಒಬ್ಬ ವ್ಯಕ್ತಿಗೆ ಪ್ರತಿನಿತ್ಯ ₹ 200ಗಳ ಪೆಟ್ರೋಲ್ ಬೇಕಾಗುತ್ತದೆ. ಒಂದು ವರ್ಷಕ್ಕೆ ₹ 60 ಸಾವಿರ ಮೊತ್ತದ ಪೆಟ್ರೋಲ್ ಬೇಕಾಗುತ್ತದೆ. ಪೆಟ್ರೋಲ್ ಸಾಲ ಕೊಡಲು ಪ್ರಧಾನಿ ನರೇಂದ್ರ ಮೋದಿಯವರು ಬ್ಯಾಂಕ್ಗಳಿಗೆ ಅರ್ಜಿ ಫಾರಂಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಾಧಿಕ್ ಸದ್ದಾಂ, ಮೊಹಮ್ಮದ್ ವಾಜಿದ್, ಉತ್ತರ ವಲಯದ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್, ಕಾರ್ಯದರ್ಶಿ ರಾಕೇಶ್, ಯುವ ಮುಖಂಡ ಫಾರೂಕ್ ಶೇಖ್ ಪಾಲ್ಗೊಂಡಿದ್ದರು