,ಸದ್ಯಕ್ಕೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ದಿನಾಂಕ ನಿಗದಿಯಾಗಿಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್
ಮನವಿ ಮಾಡಿದ್ದಾರೆ.
ಈ ಹಿಂದೆಯೇ ಸುರೇಶ್ ಕುಮಾರ್ 21 ದಿನಗಳ ನಂತರವಷ್ಟೇ ಪರೀಕ್ಷೆಗಳ ವಿಚಾರ ಚರ್ಚೆಯಾಗಲಿದೆ ಎಂದು ಹೇಳಿದ್ದರು. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಪರೀಕ್ಷೆಗಳ ಕುರಿತು ಹಲವು ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಪ್ರಮುಖ ವಿಷಯಗಳ ಕುರಿತಂತೆ ನಿರ್ದೇಶನ ನೀಡಿದರು.
ನಂತರ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಬಾಕಿ ಉಳಿದಿರುವ ಆಂಗ್ಲ ಭಾಷೆ ಪರೀಕ್ಷೆಗಳನ್ನು ನಡೆಸಲಾಗುವುದು. ಕೊರೊನಾ ಲಾಕ್ಡೌನ್ ಅವಧಿ ಸಂಪೂರ್ಣವಾದ ಬಳಿಕ ಸುರಕ್ಷಿತ ವಾತಾವರಣದ ಲಭ್ಯವಾದ ಬಳಿಕ ಪರೀಕ್ಷೆಗಳನ್ನು ನಡೆಸಲು ನಿರ್ಣಯಿಸಲಾಗುವುದು
ಎಂದು ಪುನರುಚ್ಚರಿಸಿದರು.
ವಿಶೇಷವಾಗಿ ಎಸ್ಎಸ್ಎಲ್ಸಿ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ 7 ರಿಂದ 10 ದಿನಗಳ ಪುನರ್ಮನನ ಅವಧಿಯನ್ನು ಕಲ್ಪಿಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಮನಸ್ಥಿತಿಗೆ ಬರುವಂತೆ ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಏಪ್ರಿಲ್- ಮೇ ತಿಂಗಳಿನಲ್ಲಿ ಯಾವುದೇ ಪಬ್ಲಿಕ್ ಪರೀಕ್ಷೆಗಳು ಇರುವುದಿಲ್ಲ. ಮೇ ತಿಂಗಳಿನಲ್ಲಿ ಇರಬಹುದಾದ ಪರಿಸ್ಥಿತಿಗಳನ್ನು ಸುದೀರ್ಘವಾಗಿ ಪರಾಮರ್ಶಿಸಿ, ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲು ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ವಿಶೇಷವಾಗಿ ಕೋರ್ ವಿಷಯಗಳ ಪರೀಕ್ಷೆಗಳ ನಡುವೆ ನಿಗದಿತ ಅಂತರವನ್ನು ಕಾಯ್ದುಕೊಳ್ಳಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಬಳಿಕ ಪೂರಕ ಪರೀಕ್ಷೆಗಳನ್ನು ನಡೆಸಬೇಕಾಗಿದ್ದು, ಇದಕ್ಕೂ ಸಹ ಅವಶ್ಯಕ ಸಮಯವನ್ನು ದೊರಕಿಸಿಕೊಂಡು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಿನ ದಿನಗಳಲ್ಲಿ ಉದ್ಭವವಾಗುವ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಣಯಿಸಲು ಸೂಚನೆ ನೀಡಿದ್ದೇನೆ ಎಂದರು.
ಎಸ್ ಎಸ್ ಎಲ್ ಕಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳು ಓದಿನಲ್ಲಿ ಎದುರಿಸುತ್ತಿರಬಹುದಾದ ಗೊಂದಲಗಳ ನಿವಾರಣೆಗೆ ಕ್ರಮವನ್ನು ವಹಿಸಲು ಈಗಾಗಲೇ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದರ ಜೊತೆಗೆ ದೂರದರ್ಶನದ ಚಂದನ ವಾಹಿನಿ ಮತ್ತು ಆಕಾಶವಾಣಿಯಲ್ಲಿ ಮಕ್ಕಳ ಉಪಯೋಗಕ್ಕಾಗಿ ಈಗಾಗಲೇ ಧ್ವನಿಮುದ್ರಿಸಲಾಗಿರುವ ಪರೀಕ್ಷಾ ಸಿದ್ಧತಾ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡಲು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಬಾಕಿ ಉಳಿದಿರುವ ಇಂಗ್ಲೀಷ್ ಪರೀಕ್ಷೆ ಬಳಿಕ ಕೈಗೆತ್ತಿಕೊಳ್ಳಲಾಗುವುದು. ಇಂಗ್ಲೀಷ್ ಪತ್ರಿಕೆಯ ಪರೀಕ್ಷೆಯನ್ನೂ ಸಹ ಕೊರೊನಾ ಲಾಕ್ಡೌನ್ ಅವಧಿ ಸಂಪೂರ್ಣವಾಗಿ ಮುಗಿದ ಬಳಿಕ ನಿರ್ಣಯಿಸಲಾಗುವುದು. ಪಿಯುಸಿ ಉಪನ್ಯಾಸಕರ ಸಂಘಟನೆ ಇಂತಹ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮೌಲ್ಯಮಾಪನ ಬಹಿಷ್ಕಾರದಂತಹ ನಿರ್ಣಯವನ್ನು ಹಿಂಪಡೆಯುತ್ತೇವೆಂಬ ಮಾತನ್ನು ಹೇಳಿದ್ದು, ಇದನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದರು.
ಕೊರೊನಾ ಸೋಂಕು ಸೃಷ್ಟಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆಯಿಂದ ಸಾಮಾಜಿಕ ಸುರಕ್ಷತೆ ಹಾಗೂ ಸಾಮಾಜಿಕ ಅಂತರದ ಸಮಸ್ಯೆಗಳು ಉದ್ಭವವಾಗದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಜಾರಿಯಲ್ಲಿಡಬೇಕೆಂದು ಸೂಚಿಸಿದ್ದೇನೆ. ಯಾವ ಜಿಲ್ಲಾ/ ತಾಲೂಕು ಕೇಂದ್ರಗಳಲ್ಲಿ ಅಥವಾ ಯಾವುದೇ ಮೌಲ್ಯಮಾಪನ ಕೇಂದ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆ ಮೌಲ್ಯಮಾಪಕರನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಉಪಕೇಂದ್ರಗಳನ್ನು ಸೃಷ್ಟಿಸುವ ಮೂಲಕ ಕನಿಷ್ಠ ಸಂಖ್ಯೆಯ ಮೌಲ್ಯಮಾಪಕರನ್ನು ಒಂದು ಕೇಂದ್ರದಲ್ಲಿ ಮೌಲ್ಯಮಾಪನಕ್ಕಾಗಿ ನಿಯೋಜಿಸಲು ಸೂಚಿಸಲಾಗಿದೆ.
ಕೊರೊನಾ ಲಾಕ್ಡೌನ್ ಅವಧಿ ಮುಗಿದ ಬಳಿಕ ಟಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳು ನಿಗದಿಯಾಗುವ ಸಂದರ್ಭದಲ್ಲಿ ಬೇರಾವುದೇ ಪರೀಕ್ಷೆಗಳ ದಿನಾಂಕಗಳಿಗೆ ಘರ್ಷಣೆಯಾಗದ ರೀತಿಯಲ್ಲಿ ನಿಗದಿಪಡಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿ ಕುರಿತಂತೆ ಕೂಡಲೇ ಕೌನ್ಸೆಲಿಂಗ್ ದಿನಾಂಕವನ್ನು ನಿಗದಿಪಡಿಸಿ ಮೇ 2020ರಲ್ಲಿ ಕೌನ್ಸೆಲಿಂಗ್ನ್ನ ಲಾಕ್ಡೌನ್ ತೆರವಿನ ಆಧಾರದಲ್ಲಿ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿ ಕುರಿತಂತೆ ಕೂಡಲೇ ಕೌನ್ಸೆಲಿಂಗ್ ದಿನಾಂಕವನ್ನು ನಿಗದಿಪಡಿಸಿ ಮೇ 2020ರಲ್ಲಿ ಕೌನ್ಸೆಲಿಂಗ್ನ್ನ ಲಾಕ್ಡೌನ್ ತೆರವಿನ ಆಧಾರದಲ್ಲಿ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಶಿಕ್ಷಣ ಇಲಾಖೆ ಮಕ್ಕಳ ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭಿಸುತ್ತಿರುವ ಯೂ-ಟ್ಯೂಬ್ ಚಾನೆಲ್ಗೆ ಸಾಕಷ್ಟು ಜನ ಕಂಟೆಂಟ್ ಒದಗಿಸುತ್ತಿದ್ದು, ಅತ್ಯುತ್ತಮವಾದ ಸ್ಕ್ರೀನಿಂಗ್ ವ್ಯವಸ್ಥೆಯ ಮೂಲಕ ಅತ್ಯುತ್ತಮ ಕಂಟೆಂಟ್ ಮಾತ್ರವೇ ಆಯ್ಕೆ ಮಾಡಬೇಕು ಮತ್ತು ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಇರದ ಉತ್ಕೃಷ್ಟವಾದ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಸೂಚನೆ ನೀಡಿದರು.
9. 6 ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿ ಕುರಿತಂತೆ ಕೆಲವು ಹೊಸ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ (ಬಿಇ, ಬಿಕಾಂ, ಡಿಪ್ಲಮೋ ಸೇರಿದಂತೆ ಇತ್ಯಾದಿ) ನೇಮಕಾತಿಯಲ್ಲಿ ಅವಕಾಶ ಕಲ್ಪಿಸುವ ಸಲುವಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸೂಚನೆ ನೀಡಲಾಗಿದೆ. ಹಾಗಾಗಿ ಆದಷ್ಟು ಶೀಘ್ರವಾಗಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ನಡೆಸಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಯನ್ನು ತರಲು ಹಾಗೂ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಎಸ್ಎಟಿಎಸ್ ತಂತ್ರಾಂಶದಲ್ಲಿ ಈ ತಿಂಗಳ 14ನೇ ತಾರೀಖಿನೊಳಗೆ ಫಲಿತಾಂಶ, ಹಾಜರಾತಿ ಸೇರಿದಂತೆ ಪೂರಕ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಇಲಾಖಾ ಮುಖ್ಯಸ್ಥರು ಸೂಚನೆ ನೀಡಿದ್ದು, ಹಲವಾರು ಜಿಲ್ಲೆಗಳಲ್ಲಿ ಶಿಕ್ಷಕರು ಶಾಲೆಗೆ ಹೋಗುವ ಪರಿಸ್ಥಿತಿ ಇಲ್ಲವಾದ್ದರಿಂದ ಈ ತಂತ್ರಾಂಶದಲ್ಲಿ ಅಪ್ಡೇಟ್ ಮಾಡಲು ಲಾಕ್ಡೌನ್ ಅವಧಿ ಮುಗಿದ ಬಳಿಕ ಒಂದು ವಾರದ ಸಮಯವನ್ನು ನೀಡಲು ಸೂಚನೆ ನೀಡಲಾಗಿದೆ. ಅದೇ ರೀತಿ ಬೇಸಿಗೆ ರಜೆಯ ಮುನ್ನ ಶಿಕ್ಷಕರಿಗೆ ಪೂರೈಸಲು ನೀಡಿರುವ ಶೈಕ್ಷಣಿಕ ಚಟುವಟಿಕೆಗಳ ಕುರಿತಾದ ಜವಾಬ್ದಾರಿ ಪೂರ್ಣಗೊಳಿಸಲು ಲಾಕ್ಡೌನ್ ಅವಧಿ ಬಳಿಕ ಒಂದು ವಾರದ ಸಮಯವನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹಲವಾರು ಶೈಕ್ಷಣಿಕ ನಿರ್ಣಯಗಳನ್ನು ಹಾಗೂ ಸೂಚನೆಗಳನ್ನು ನೀಡುವ ಸಲುವಾಗಿ ಏಪ್ರಿಲ್ 13ರಂದು, ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರುಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಲು ಸೂಚನೆ ನೀಡಲಾಗಿದೆ ಅಂತಾ ತಿಳಿಸಿದರು. ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ಸಮಗ್ರ ಶಿಕ್ಷಣ ಕರ್ನಾಟಕ ಎಸ್.ಪಿ.ಡಿ. ಡಾ. ರೇಜು, ಪಿಯು ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.