ವಿಜಯಪುರ: ’18 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಮೇ 1ರಿಂದ ಕೋವಿಡ್ ಲಸಿಕೆ ಪೂರೈಕೆಯಾಗದಿದ್ದರೆ ನನ್ನ ವೈಯಕ್ತಿಕ ಹಣ ನೀಡಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆ, ಜೈನ್ ಫೌಂಡೇಶನ್ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ನಗರದ ಸೊಲ್ಲಾಪುರ ರಸ್ತೆಯ ಜೈನ್ ಕಾಲೇಜಿನಲ್ಲಿ ತೆರೆಯಲಾದ ಆಕ್ಷಿಜನ್ ಹಾಗೂ ಸಾಮಾನ್ಯ ಬೆಡ್ (100)ಗಳನ್ನು ಹೊಂದಿದ ಕೋವಿಡ್ ಆರೈಕೆ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ವಿಜಯಪುರ ನಗರದಲ್ಲಿ ಶೇ 57ರಷ್ಟು ಜನ ಲಸಿಕೆ ಪಡೆದಿದ್ದು, ಇಡೀ ಕರ್ನಾಟಕದಲ್ಲೇ ವಿಜಯಪುರ ನಗರ ನಂ.1 ಇದೆ ಎಂದರು.
ನಗರದಲ್ಲಿರುವ 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ, ಲಸಿಕೆ ಪಡೆದ ಎಲ್ಲರೂ ಈ ರೋಗದಿಂದ ಪಾರಾಗಬಹುದಾಗಿದೆ ಎಂದು ಹೇಳಿದರು.
ಲಸಿಕೆ ಪಡೆದಾಗಲೂ ಸಹ ಕೆಲವೊಮ್ಮೆ ಕೋವಿಡ್ ರೋಗ ಲಕ್ಷಣ ಕಾಣಬಹುದು. ಆದರೆ, ಪ್ರಾಣಕ್ಕೆ ಏನು ತೊಂದರೆಯಾಗುವುದಿಲ್ಲ, ತೀರ್ವ ಸ್ವರೂಪದ ಅಪಾಯಗಳಾಗುವುದಿಲ್ಲ, ರೋಗದಿಂದ ಆರೋಗ್ಯದಲ್ಲಿ ತೀವ್ರ ತೊಂದರೆಯಾಗುವುದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಆದ್ದರಿಂದ ತಪ್ಪದೆ ಸಲಿಕೆ ಪಡೆಯಿರಿ ಎಂದರು.
ಇಲ್ಲಿ ಬರುವಂತಹ ರೋಗಿಗಳಿಗೆ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಉಚಿತವಾಗಿ ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಅಲ್ಪಾಹಾರ ಮತ್ತು ರಾತ್ರಿ ಊಟ, ಬಿಸಿ ನೀರು, ಹಣ್ಣು ಹಂಪಲು ಕೊಡುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿದ್ಧೇಶ್ವರ ಸಂಸ್ಥೆಯ ಶಾಲಾ ಬಸ್ಗಳನ್ನು ಹಾಗೂ ಸಿಬ್ಬಂದಿಯನ್ನು ಅಲ್ಲಿ ನೇಮಿಸಲಾಗಿದೆ ಎಂದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸಿಸ್ ಕೇಂದ್ರದಲ್ಲಿ 27 ಬೆಡ್ಗಳ ವೆಂಟಿಲೇಟರ್, ಆಕ್ಷಿಜನ್ ಒಳಗೊಂಡಂತಹ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಗಿದೆ ಎಂದರು.
ಒಂದು ಕಡೆ ಉಚಿತ ಲಸಿಕಾ ಅಭಿಯಾನ, ಇನ್ನೊಂದೆಡೆ ಕೋವಿಡ್ ರೋಗಿಗಳಿಗಾಗಿ ಬೆಡ್ಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಸಿದ್ಧಸಿರಿ ಸೌಹಾರ್ದ ಸಹಕಾರಿ ಜಂಟಿ ವ್ಯವಸ್ಥಾಪಕ ನಿರ್ದೇಶ ರಾಘವ ಅಣ್ಣಿಗೇರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಎಸ್.ಎಲ್.ಲಕ್ಕಣ್ಣವರ, ಡಾ. ಶರಣ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜೈನ್ ಫೌಂಡೇಶನ್ ಶಾಂತಿಲಾಲ್ ಓಸ್ವಾಲ್ ಇದ್ದರು.
ನಗರದ ಗ್ಯಾಂಗ್ ಬಾವಡಿ ಸರ್ಕಾರಿ ಶಾಲೆ ನಂ.10 ರಲ್ಲಿ ಹಾಗೂ ತೊರವಿ ಗ್ರಾಮದ ಲಕ್ಷ್ಮೀ ಗುಡಿ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೂ ಶಾಸಕರು ಚಾಲನೆ ನೀಡಿದರು.