ಬೆಂಗಳೂರು: ರಾಜ್ಯದಲ್ಲಿ 15 ದಿನಗಳ ಕಠಿಣ ಕರ್ಫ್ಯೂ ಮಾಡುವ ಬಗ್ಗೆ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಸಿದ್ದು, ‘ಜನರ ಆರೋಗ್ಯ ಕಾಪಾಡಲು ಯಾವುದೇ ಕ್ರಮಗಳನ್ನು ತೆಗೆದುಕೊಂಡರೂ ನಮ್ಮ ಅಭ್ಯಂತರ ಇಲ್ಲ. ಆದರೆ, ಈ ಕಠಿಣ ನಿಯಮಗಳಿಂದ ತೊಂದರೆಗೊಳಗಾಗುವವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಸರ್ಕಾರದ ದಿಢೀರ್ ತೀರ್ಮಾನಗಳಿಂದ ಎಲ್ಲ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ಕಟ್ಟಿ, ಸಮಾಜವನ್ನು ರಕ್ಷಿಸುತ್ತಿರುವ ವರ್ತಕರಿಗೆ ಅನ್ಯಾಯವಾಗಿದೆ. ಈ ಸರ್ಕಾರ ತಮ್ಮ ಕೊನೆ ದಿನಗಳನ್ನು ಕಾಣುತ್ತಿರುವುದಕ್ಕೆ ಇದು ನಮ್ಮ ಕಣ್ಣಮುಂದೆ ಕಾಣುತ್ತಿರುವ ಸಾಕ್ಷಿಯಾಗಿದೆ’ ಎಂದಿದ್ದಾರೆ.
ಇನ್ನು, ‘ವಾಣಿಜ್ಯ ಆಸ್ತಿ ತೆರಿಗೆಯನ್ನು ಎರಡು ವರ್ಷಗಳ ಅವಧಿಗೆ ಮನ್ನಾ ಮಾಡಬೇಕು. ಎಲ್ಲ ಸಾಲಗಳ ಅವಧಿಯನ್ನು 2 ವರ್ಷಗಳ ಕಾಲ ಮುಂದೂಡಬೇಕು. 10 ಲಕ್ಷ ರೂ. ದಿಂದ 20 ಲಕ್ಷ ರೂ. ವರೆಗಿನ ಸಾಲದ ಬಡ್ಡಿಯನ್ನು ಸರ್ಕಾರವೇ ಕಟ್ಟಿಕೊಡಬೇಕು ಹಾಗೂ ಸಾರಿಗೆ, ಹೋಟೆಲ್, ಉದ್ಯಮ ಕ್ಷೇತ್ರಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಬೇಕು ಎಂದು ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕರ ಜೊತೆಗೆ ನಡೆಸಿದ ಸಭೆಯಲ್ಲಿ ಅವರು ಬೇಡಿಕೆ ಇಟ್ಟಿದ್ದಾರೆ. ವಿರೋಧ ಪಕ್ಷವಾಗಿ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದಿದ್ದಾರೆ.
ಸರ್ಕಾರ ‘ಲಾಕ್ ಡೌನ್ ಎಂಬ ಪದ ಬಳಸದೆ ಎಲ್ಲವನ್ನೂ ಬಂದ್ ಮಾಡುವ ಜಾಣತನಕ್ಕೆ ಮುಂದಾಗಿದೆ. ಲಾಕ್ ಡೌನ್ ಪದ ಬಳಕೆ ಮಾಡಿದರೆ ಆರ್ಥಿಕ ಪ್ಯಾಕೇಜ್ ಕೊಡಬೇಕಾಗುತ್ತದೆ ಎಂದು ಲಾಕ್ ಡೌನ್ ಮಾದರಿಯ ನಿಯಮಗಳನ್ನೇ ಕಠಿಣ ಕರ್ಫ್ಯೂ ನಿಯಮದ ಹೆಸರಲ್ಲಿ ರಾಜ್ಯವನ್ನು ಬಂದ್ ಮಾಡಲು ಹೊರಟಿದೆ. ಇದರಿಂದ ಎಲ್ಲ ವರ್ಗದ ಜನರಿಗೂ ಕಷ್ಟವಾಗಲಿದೆ. ಈ ಲಾಕ್ ಡೌನ್ ಮಾದರಿಯ ಕ್ರಮದ ಹೊರತಾಗಿ ಬೇರೆ ಮಾರ್ಗಗಳನ್ನು ಸರ್ಕಾರ ಅನುಸರಿಸಲಿ’ ಎಂದು ಡಿಕೆ ಶಿವಕುಮಾರ್ ಸಲಹೆ ನೀಡಿದ್ದಾರೆ.