ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ನಡುವೆ ಆಸ್ಪತ್ರೆಗೆ ನುಗ್ಗಿ ಜನರ ಮೇಲೆ ಉಗುಳುವ ಮೂಲಕ ಸೋಂಕು ಹರಡಲು ಯತ್ನಿಸಿದ ಕಿಡಿಗೇಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಆಜಾದ್ ಪಾರ್ಕ್ ನಿವಾಸಿ ಇನಾಯತ್ ಉಲ್ಲಾಖಾನ್ ಈ ಕೃತ್ಯವೆಸೆಗಿದ ಆರೋಪಿ ಎಂದು ಗುರುತಿಸಲಾಗಿದೆ. ಗದಗ ರಸ್ತೆ ಇಸಿಎಸ್ಎಚ್ ಆಸ್ಪತ್ರೆಗೆ ಮಾರ್ಚ 3ರ ಮಧ್ಯಾಹ್ನ 1 ಗಂಟೆಗೆ ಏಕಾಏಕಿ ಪ್ರವೇಶ ಮಾಡಿದಲ್ಲದೇ, ಅಲ್ಲಿದ್ದ ಜನರ ಮೇಲೆ ಇನಾಯತ್ ಉಗುಳಿದ್ದಾನೆ. ಕೊರೊನಾ ಸೋಂಕು ಪರಸ್ಪರ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಹಾಗೂ ಮಾತನಾಡುವಾಗ, ಸೀನುವಾಗ ಕೆಮ್ಮುವಾಗ ಹೊರಬರುವ ದ್ರವದಿಂದಲೇ ಇನ್ನೊಬ್ಬರಿಗೆ ಹರಡುತ್ತದೆ. ಅಂಥದರಲ್ಲಿ ಇನಾಯತ್ ಜನರ ಮೇಲೆ ಉಗುಳುವ ಮೂಲಕ ಇನ್ನಷ್ಟು ಭಯ ಹುಟ್ಟಿಸಿದ್ದಾನೆ ಎಂದು ದೂರಲಾಗಿದೆ.
ಆರೋಪಿ ಏಕಾಏಕಿ ಆಸ್ಪತ್ರಗೆ ನುಗ್ಗಿ ಜನರ ಮೇಲೆ ಉಗುಳಿ ಭೀತಿ ಹೆಚ್ಚಿಸಿದ್ದಾನೆ. ಒಂದು ವೇಳೆ ಆತನಿಗೆ ಸೋಂಕು ತಗುಲಿದ್ದರೆ ಬೇರೆಯವರಿಗೂ ಅದು ಹರಡುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಸಿಬ್ಬಂದಿ ಯೂಹಾನನ್ ಅವರು ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆ ಇನಾಯತ್ ಮೇಲೆ ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಆರೋಪ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಾಗಿ ಕಿಮ್ಸ್ ಗೆ ಕಳುಹಿಸಿದ್ದಾರೆ.
ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಇನಾಯತ್ ಮೇಲೆ ಐಪಿಸಿ ಸೆಕ್ಷನ್ 188, 269, 270, 448 ಅಡಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.