ಬೆಂಗಳೂರು: ಸಾರಿಗೆ ನೌಕರರು ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹೋಗಬಾರದು ಎಂದು ಮನವಿ ಮಾಡುತ್ತೇವೆ. 9 ಬೇಡಿಕೆಗಳಲ್ಲಿ ಒಂದು ಬೇಡಿಕೆ ಬಿಟ್ಟು ಎಲ್ಲಾ ಈಡೇರಿಸಿದ್ದೇವೆ ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ತುರ್ತು ಸಭೆ ಕರೆದ ಸಿಎಂ ಬಿಎಸ್ ಯಡಿಯೂರಪ್ಪ,
ನಾಲ್ಕು ನಿಗಮಗಳ ಎಂಡಿಗಳ ಜೊತೆ ಕೃಷ್ಣಾದಲ್ಲಿ ಸಭೆ ನಡೆಸಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸಾರಿಗೆ ಇಲಾಖೆ ಎಸಿಎಸ್ ಅಂಜುಂ ಪರ್ವೇಜ್, ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್, ಬಿಎಂಟಿಸಿ ಎಂಡಿ ಶಿಖಾ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ 6ನೇ ವೇತನ ಆಯೋಗ ಶಿಫಾರಸ್ಸು ಜಾರಿ ಮಾಡಲು ಆಗಲ್ಲ. ಶೇ.8 ವೇತನ ಹೆಚ್ಚಳ ಮಾಡುತ್ತೇವೆ. ಚುನಾವಣಾ ಆಯೋಗ ಅನುಮತಿ ಕೊಡಬೇಕು. ಆಯೋಗದ ಅನುಮತಿಯನ್ನು ಕೇಳಿದ್ದೇವೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಸಂಬಳ ಹೆಚ್ಚಳ ಮಾಡಲು ಆಗುತ್ತಿಲ್ಲ. ಪ್ರತಿಭಟನೆಗೆ ಹೋಗಬಾರದು, ಮನವಿ ಮಾಡಿದ್ದೇವೆ ಎಂದರು.
ಪ್ರತಿಭಟನೆಗೆ ಹೋದರೆ ಸಾರಿಗೆ ಇಲಾಖೆ ಬೇರೆ ವ್ಯವಸ್ಥೆ ಮಾಡಲಿದೆ. ಸಾರಿಗೆ ಪ್ರತಿಭಟನೆಯನ್ನ ಕಠಿಣವಾಗಿ ಡೀಲ್ ಮಾಡುತ್ತೇವೆ. ಈ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಾತುಕತೆಗೆ ಹೋಗುವ ಪ್ರಶ್ನೆಯೇ ಇಲ್ಲ. ಬಸ್ಸಿಗೆ ಹಾನಿ ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಸ್ಮಾ ಜಾರಿ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.