ಬೆಂಗಳೂರು: ಲಾಕ್ಡೌನ್ ಮುಗಿಯುವರೆಗೂ ಬಡವರಿಗೆ ಉಚಿತ ಹಾಲು ವಿತರಣೆ ಮಾಡುವಂತೆ ಸಿಎಂ ಯಡಿಯೂರಪ್ಪ ಫೋಷಣೆ ಮಾಡಿದ್ದರು. ಆದರೆ ಸಿಲಿಕಾನ್ ಸಿಟಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಉಚಿತ ಹಾಲಿಗಾಗಿ ಜನರು ಮುಗಿಬಿದ್ದಿದ್ದಾರೆ.
ಬೆಂಗಳೂರಿನ ಪಂತರಪಾಳ್ಯ, ಕಮಲನಗರದಲ್ಲಿ ತಂಡೋಪ ತಂಡವಾಗಿ ಜನರು ಬಂದು ಉಚಿತವಾಗಿ ಹಾಲು ಪಡೆಯುತ್ತಿದ್ದಾರೆ. ಅಲ್ಲದೇ ಹಾಲಿಗಾಗಿ ಕಿಲೋ ಮೀಟರ್ಗಟ್ಟಲೇ ಕ್ಯೂನಲ್ಲಿ ಜನರು ನಿಂತಿದ್ದಾರೆ. ಹಾಲು ಪಡೆಯಲು ಬಂದವರು ಮಾಸ್ಕ್ ಹಾಕಿಲ್ಲ, ಜೊತೆಗೆ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಜನರು ಗುಂಪು ಗುಂಪಾಗಿ ಸೇರಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಲು ವಿತರಣೆಯನ್ನ ಬಂದ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಜನಸಂದಣಿಯನ್ನ ಕಂಟ್ರೋಲ್ ಮಾಡಲು ಹೊಯ್ಸಳ ವಾಹನದ ಮೂಲಕ ಜನರನ್ನು ಪೊಲೀಸರು ಚದುರಿಸುತ್ತಿದ್ದಾರೆ. ಇನ್ನೂ ಟಿ ದಾಸರಹಳ್ಳಿಯ ಮೆಟ್ರೋ ನಿಲ್ದಾಣದ ಬಳಿ ಬೆಳಗಿನ ಜಾವ 6 ಗಂಟೆಯಿಂದಲೇ ಸ್ಥಳೀಯರು ಸಾಲುಗಟ್ಟಿ ನಿಂತಿದ್ದಾರೆ.
ಮೈಸೂರು ರೋಡ್ನ ಪಂಥರಪಾಳ್ಯದಲ್ಲಿ ಹಾಲಿನ ವಾಹನಕ್ಕೆ ಜನರು ಮುಗಿಬಿದ್ದಿದ್ದಾರೆ. ಹಾಲಿನ ವಾಹನ ಬರುವುದನ್ನು ನೋಡಿ ವಾಹನದ ಹಿಂದೆ ಜನರು ಓಡೋಡಿ ಬಂದಿದ್ದಾರೆ. ಈ ನೂಕು ನುಗ್ಗಲಿನಲ್ಲಿ ನೂರಾರು ಪ್ಯಾಕೆಟ್ ಹಾಲು ಮಣ್ಣು ಪಾಲಾಗಿದೆ. ಇದರಿಂದ ಸಿಬ್ಬಂದಿ ರಸ್ತೆಯುದ್ದಕ್ಕೂ ಹಾಲಿನ ಪ್ಯಾಕೆಟ್ಗಳ ಚೆಲ್ಲಿದ್ದಾರೆ. ಆಗ ಕೈಗೆ ಸಿಕ್ಕಷ್ಟು ಹಾಲಿನ ಪ್ಯಾಕೆಟ್ಗಳನ್ನು ತೆಗೆದುಕೊಂಡು ಜನರು ಹೋಗುತ್ತಿದ್ದಾರೆ.