ಚಿತ್ರದುರ್ಗ: ‘ಶರಣ ಸೇನೆ ಹೆಸರಿನಲ್ಲಿ ಧರ್ಮಾತೀತ, ಜಾತ್ಯತೀತ ಹಾಗೂ ಪಕ್ಷಾತೀತ ಸಂಘಟನೆ ಸ್ಥಾಪಿಸಲಾಗಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
‘ಮುರುಘಾ ಮಠದಲ್ಲಿ ಮಾರ್ಚ್ 14ರಂದು ಬೆಳಿಗ್ಗೆ 11ಕ್ಕೆ ಶರಣ ಸೇನೆ ಉದ್ಘಾಟನೆಯಾಗಲಿದೆ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇನೆಗೆ ಚಾಲನೆ ನೀಡುವರು. ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಟಿ.ರಘುಮೂರ್ತಿ ಸೇನೆಯ ಲೋಗೊ ಬಿಡುಗಡೆಗೊಳಿಸುವರು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಇದು ರಾಜ್ಯಮಟ್ಟದ ಸಂಘಟನೆಯಾಗಿದೆ. ಪ್ರತಿ ಎರಡು ಜಿಲ್ಲೆಗಳಿಗೆ ಒಂದು ಘಟಕ ಸ್ಥಾಪಿಸಲಾಗುವುದು. ಸಮ ಸಮಾಜ ನಿರ್ಮಾಣ, ದೇಶ ಮತ್ತು ರಾಜ್ಯದ ಒಳಿತಿಗಾಗಿ, ಪ್ರಗತಿಗಾಗಿ ಹಾಗೂ ಪ್ರಕೃತಿ ವಿಕೋಪ ಉಂಟಾದಾಗ ನೆರವು ನೀಡಲು ಸೇನೆಯ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದರು.
‘ಮೊದಲ ಹಂತದಲ್ಲಿ ಸಾವಿರಾರು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ. ನಿತ್ಯವೂ ಸೇನೆಯ ಕಾರ್ಯಕರ್ತರ ಸಂಖ್ಯೆ ಹೆಚ್ಚಲಿದೆ. ನಿಸ್ವಾರ್ಥ ಮನೋಭಾವದಿಂದ ಎಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಲಿದ್ದಾರೆ’ ಎಂದು ಶರಣರು ಹೇಳಿದರು.
Laxmi News 24×7