Breaking News

ಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ: ರಮೇಶ್ ಜಾರಕಿಹೊಳಿ

Spread the love

ಬೆಂಗಳೂರು, ಮಾರ್ಚ್ 9: ಒಬ್ಬ ಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ. ಅವರ ಬಗ್ಗೆ ಈಗ ಹೇಳಲು ಆಗುವುದಿಲ್ಲ. ಸಿಡಿ ಬಿಡುಗಡೆ ಬಗ್ಗೆ ಹೈಕಮಾಂಡ್ ಮೊದಲೇ ನನಗೆ ಮಾಹಿತಿ ನೀಡಿತ್ತು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಸಿಡಿ ಪ್ರಕರಣದಲ್ಲಿ ರಾಜೀನಾಮೆ ನೀಡಿದ ಬಳಿಕ ಮಂಗಳವಾರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಭಾವುಕರಾದರು.

ಈ ಸಿಡಿಯನ್ನು ನಾಲ್ಕು ತಿಂಗಳ ಹಿಂದೆಯೇ ಮಾಡಿರುವುದು. ಅದು ನನಗೆ ತಿಳಿದಿತ್ತು. ಅದರ ಬಿಡುಗಡೆ ಬಗ್ಗೆ 26 ಗಂಟೆ ಮೊದಲೇ ಹೈಕಮಾಂಡ್ ನನಗೆ ತಿಳಿಸಿತ್ತು. ಇದರ ಬಗ್ಗೆ ಹೆದರುವ ಅಗತ್ಯವಿಲ್ಲ. ಕಾನೂನು ಕ್ರಮ ತೆಗೆದುಕೊಳ್ಳಲು ಸಿದ್ಧರಾಗಿ ಎಂದು ಹೇಳಿತ್ತು. ಆದರೆ ನಾನು ಧೈರ್ಯದಿಂದ ಕಾನೂನು ಹೋರಾಟಕ್ಕೆ ಹೋಗಿರಲಿಲ್ಲ. ಯಾವುದಕ್ಕೂ ಹೆದರದೆ ಸಭೆಗೆ ಹೋಗಿ ಬಂದಿದ್ದೆ. ಅಂದು ವಚನಾನಂದ ಶ್ರೀಗಳ ಜತೆಗೂ ಮಾತನಾಡಿದ್ದೆ ಎಂದು ತಿಳಿಸಿದರು.

ನಾನು ಬಹಳ ದುಃಖದಲ್ಲಿದ್ದೇನೆ. ನಾಲ್ಕೈದು ದಿನಗಳಿಂದ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ರಾಜೀನಾಮೆ ನೀರುವುದು ನನ್ನ ವೈಯಕ್ತಿಕ ನಿರ್ಧಾರ. ಈ ಸಿಡಿಯಲ್ಲಿ ಸತ್ಯಾಂಶವಿಲ್ಲ. ಇದು ಶೇ 100ರಷ್ಟು ನಕಲಿ ಎಂದು ಹೇಳಿದರು.

ಮಹಾನ್ ನಾಯಕನಿಂದ ಇದೆಲ್ಲ ಆಗಿದೆ

ಏನೇನು ಬೆಳವಣಿಗೆ ಆಗಲಿದೆ ಎಂದು ನೋಡಲು ಒಂದು ದಿನ ಕಾದು ರಾಜೀನಾಮೆ ನೀಡಿದೆ. ರಾಜೀನಾಮೆ ನೀಡಿದ ನಂತರ ನೆರವಾಗಿ ಊರಿಗೆ ಹೋಗಿದ್ದೆ. ನಂತರ ಯಾವ ಬೆಳವಣಿಗೆಗಳು ನಡೆದಿದೆಯೋ ನನಗೆ ಗೊತ್ತಿಲ್ಲ. ಒಬ್ಬ ಮಹಾನ್ ನಾಯಕನಿಂದ ಇದೆಲ್ಲಾ ಆಗಿದೆ. ಅವರ ಬಗ್ಗೆ ಈಗ ಹೇಳಲು ಆಗುವುದಿಲ್ಲ.

ಸುಮ್ಮನೆ ಬಿಡುವುದಿಲ್ಲ

ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಅವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರನ್ನು ಜೈಲಿಗೆ ಹಾಕಿಸದೆ ಬಿಡುವುದಿಲ್ಲ. ನನ್ನ ವಿರೋಧಿಗಳಿಗೆ ಇದೊಂದು ದೊಡ್ಡ ಅಸ್ತ್ರವಾಗಿದೆ. ನನಗೆ ಖಾತೆ ಬೇಕೆಂದು ಕೇಳಲು ಹೋಗುವುದಿಲ್ಲ. ನನಗೆ ಎಲ್ಲ ಪಕ್ಷದವರ ಬಗ್ಗೆ ಗೌರವ ಇದೆ ನಾನು ಯಾವುದೇ ತಪ್ಪು ಮಾಡಿಲ್ಲ. ಮಾಡಿದ್ದರೆ ನಾನು ಸಭೆ ಮುಗಿಸಿ ಬಂದು ಮೈಸೂರಿಗೆ ದೇವರ ದರ್ಶನಕ್ಕೆ ಹೋಗುತ್ತಿರಲಿಲ್ಲ ಎಂದರು.

ಕುಟುಂಬದ ಮರ್ಯಾದೆಯೇ ಮುಖ್ಯ

ನನಗೆ ರಾಜಕಾರಣ ಬೇಕಿಲ್ಲ. ಮತ್ತೆ ರಾಜಕಾರಣಕ್ಕೆ ಬರುತ್ತೇನೋ ಇಲ್ಲವೋ ಗೊತ್ತಿಲ್ಲ. ನನಗೆ ರಾಜಕಾರಣದ ಮೇಲೆ ಆಸಕ್ತಿ ಇಲ್ಲ. ಕುಟುಂಬದ ಮರ್ಯಾದೆ ಮುಖ್ಯ. ರಾಜಮನೆತನ ನಮ್ಮದು. ಈ ಪ್ರಕರಣದಿಂದ ಕುಟುಂಬದ ಗೌರವ ಹೋಗಿದೆ. ಅದು ವಾಪಸ್ ಬರಬೇಕಿದೆ. ಬೆಂಗಳೂರಿನಲ್ಲಿ ಎರಡು ಸ್ಥಳಗಳಲ್ಲಿ ಷಡ್ಯಂತ್ರ ನಡೆದಿದೆ. ಯಶವಂತಪುರ ಮತ್ತು ಒರಾಯನ್ ಮಾಲ್ ಬಳಿ ಷಡ್ಯಂತ್ರ ನಡೆದಿದೆ. ಒರಾಯಾನ್ ಅಕ್ಕಪಕ್ಕದಲ್ಲಿ ಐದನೇ ಮಹಡಿಯಲ್ಲಿ, ಯಶವಂತಪುರ ಪೊಲೀಸ್ ಠಾಣೆ ಪಕ್ಕದ 4ನೆಯ ಮಹಡಿಯಲ್ಲಿ ಈ ಷಡ್ಯಂತ್ರ ನಡೆದಿದೆ.

ಯುವತಿಗೆ ನೀಡಿದ್ದು ಐದು ಕೋಟಿ

ಯುವತಿಗೆ ಐವತ್ತು ಲಕ್ಷ ಅಲ್ಲ, ಐದು ಕೋಟಿ ರೂ ಕೊಡಲಾಗಿದೆ ವಿದೇಶದಲ್ಲಿ ಎರಡು ಅಪಾರ್ಟ್‌ಮೆಂಟ್ ನೀಡಿರುವ ಬಗ್ಗೆ ಮಾಹಿತಿ ಇದೆ. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ನನ್ನೊಂದಿಗೆ ಮಾತನಾಡಿದ್ದಾರೆ. ಪ್ರಕರಣದಲ್ಲಿ ಅವರು ಇಲ್ಲ, ಇದ್ದಿದ್ದರೆ ನನ್ನೊಂದಿಗೆ ಯಾಕೆ ಮಾತನಾಡುತ್ತಿದ್ದರು? ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ

ಸಿಡಿ ನೂರಕ್ಕೆ ನೂರರಷ್ಟು ನಕಲಿ ಆಗಿದೆ. ಕೇಂದ್ರದಿಂದಲೂ ಈ ಬಗ್ಗೆ ವರದಿ ಬಂದಿತ್ತು. ಈ ಸಿಡಿ ಹಿಂದೆ ಯಾರಿದ್ದಾರೆ? ಯಾರು ಮಾಡಿದ್ದಾರೆ ಎಂಬುದನ್ನು ಮಾಧ್ಯಮದಲ್ಲಿ ನೀವೇ ತೋರಿಸಿದ್ದಿರಿ. ಈ ಸಿಡಿ ಪ್ರಕರಣದ ಹಿಂದೆ ವ್ಯವಹಾರಗಳು ನಡೆದಿವೆ. ಇದರ ಹಿಂದೆ ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.

ಸವಾಲು ಹಾಕಿದ್ದ ಮಹಾನ್ ನಾಯಕ

ಮಹಾನ್ ನಾಯಕ ಸವಾಲು ಹಾಕಿದ್ದ, ಈ ಇಲಾಖೆಯನ್ನು ಮೂರು ತಿಂಗಳು ಮಾತ್ರ ನಡೆಸುತ್ತಾನೆ ಎಂದಿದ್ದ. ಆದರೆ ನಾನು ರಾಜ್ಯವೇ ಮೆಚ್ಚುವ ಹಾಗೆ ಇಲಾಖೆ ನಡೆಸಿದಿದ್ದೇನೆ. ಅದನ್ನು ಕಂಡು ಸಹಿಸಲಾಗದೆ ಕುತಂತ್ರ ಮಾಡಿ ಇದೆಲ್ಲ ಮಾಡಿದ್ದಾನೆ. ನನ್ನನ್ನು ರಾಜಕೀಯವಾಗಿ ಮುಗಿಸಲು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಮಾನಸಿಕವಾಗಿ ನಾನು ತುಂಬಾ ನೊಂದಿದ್ದೇನೆ. ನನ್ನನ್ನು ಬೆಂಬಲಿಸಿದವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ