ಗೋಕಾಕ: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮುಖಾಂತರ ಕಲೆ, ಸಾಹಿತ್ಯದ ಜೊತೆಗೆ ಕೃಷಿ, ಉದ್ದಿಮೆಗಳ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರದಂದು ಸಂಜೆ ಇಲ್ಲಿಯ ಎನ್ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಖಂಡ ಗೋಕಾಕದ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ ಕಾಲದಿಂದಲೂ ಕನ್ನಡ ಕಟ್ಟುವ ಕೆಲಸ ನಡೆದಿದೆ. ಮಾತೃಭಾಷೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು. ಕನ್ನಡಿಗರಲ್ಲಿ ಸ್ವಾಭಿಮಾನ, ಕಿಚ್ಚು ಇರಬೇಕು. ಕನ್ನಡದ ಬಗ್ಗೆ ಮರುಚಿಂತನೆ ಮಾಡುವ ಅವಶ್ಯಕತೆ ಇದೆ. ಗಾಂಧೀಜಿ, ಬುದ್ಧ, ಬಸವಣ್ಣ, ಅಂಬೇಡಕರ ಅವರ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಹೆಚ್ಚು ಹೆಚ್ಚು ಪರಿಚಯ ಮಾಡುವ ಕೆಲಸವಾಗಬೇಕು.
ಕನ್ನಡಿಗರಿಗೆ ಉದ್ಯೋಗವಿಲ್ಲ: ಸರ್ಕಾರ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಕೆಲಸವಾಗಬೇಕು. ವಿವಿಧ ಕಾರ್ಖಾನೆಗಳಲ್ಲಿ ಬೇರೆ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಬಿಹಾರದ ಜನರೇ ಹೆಚ್ಚಾಗಿ ಉದ್ಯೋಗದಲ್ಲಿದ್ದಾರೆ. ಕಾರಣ ಅವರು ತಮ್ಮ ಭಾಷೆಯನ್ನು ಬಿಟ್ಟು ಕೊಡುವುದಿಲ್ಲ. ನಮ್ಮ ಕನ್ನಡಿಗರು ಕನ್ನಡ ಭಾಷೆಯ ಜೊತೆಗೆ ಬೇರೆ ಭಾಷೆಯನ್ನು ಕಲಿತು ಕನ್ನಡ ಭಾಷೆಯನ್ನು ಮರೆಯುತ್ತಿರುವುದು ವಿಪರ್ಯಾಸವಾಗಿದೆ. ಅಲ್ಲದೆ ಕನ್ನಡಿಗರು ಕೌಶಲ್ಯತೆ ತರಬೇತಿ ಕಲಿತು ಶೃದ್ಧೆಯಿಂದ ಕೆಲಸ ಮಾಡಬೇಕು.
ಗೋಕಾಕ ಜಿಲ್ಲೆಯಾಗಬೇಕು: ಗೋಕಾಕ, ಚಿಕ್ಕೋಡಿ, ಬೆಳಗಾವಿ ಮೂರು ಜಿಲ್ಲೆಯನ್ನಾಗಿ ಈಗಿದ್ದ ಸರ್ಕಾರ ಮಾಡಬೇಕು. ಆಡಳಿತಾತ್ಮಕ ಅಭಿವೃದ್ದಿ ಹಿತದೃಷ್ಠಿಯಿಂದ ಜಿಲ್ಲೆಯ ವಿಭಜನೆಯ ಅವಶ್ಯಕತೆ ಇದೆ. ಜಿಲ್ಲಾ ಹೋರಾಟದಲ್ಲಿ ಸಾಹಿತಿಗಳ ಪಾತ್ರವು ಮುಖ್ಯವಾಗಿದೆ. ಗೋಕಾಕದಲ್ಲಿ ಒಬ್ಬರು ಮಂತ್ರಿ ಇದ್ದಾರೆ. ಇಬ್ಬರು ಶಾಸಕರಿದ್ದೇವೆ. ಎಲ್ಲರೂ ಸೇರಿ ಜಿಲ್ಲೆ ಮಾಡಲು ಮುಂದಾಗಬೇಕು ಎಂದು ಹೇಳಿದರಲ್ಲದೆ ಸಮಾನತೆ ಬಗ್ಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಶೀಘ್ರದಲ್ಲಿಯೇ ಸಾಹಿತ್ಯ ಭವನ ನಿರ್ಮಾಣ: ಗೋಕಾಕ ನಗರದಲ್ಲಿ ಖುಲ್ಲಾ ಜಾಗೆ ಇದ್ದು ಸಾಹಿತಿಗಳು ನಗರಸಭೆ ಭೇಟಿ ನೀಡಿ ಅದನ್ನು ಕಸಾಪ ಹೆಸರಿನಲ್ಲಿ ದಾಖಲ ಮಾಡಿಕೊಂಡರೆ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಅನುದಾನ ಪಡೆಯಲು ಸಾಧ್ಯವಾಗುತ್ತದೆ. ಈ ಕೆಲಸವನದನ್ನು ಶೀಘ್ರದಲ್ಲಿ ಪ್ರಾರಂಭ ಮಾಡಬೇಕು ಎಂದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಕೌಲಗುಡ್ಡ ಸಿದ್ದಶ್ರೀ ಸಿದ್ಧಾಶ್ರಮದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿ ನಮ್ಮ ಜೀವನ, ಬದುಕು ಮತ್ತು ಉಸಿರು ಕನ್ನಡವಾಗಬೇಕು. ಮಾತೃಭಾಷೆಗೆ, ಮಾತೃದೇವಿಗೆ ನಾವು ಮೊದಲು ಗೌರವ ಕೊಡಬೇಕು. ಈ ಸಾಹಿತ್ಯ ಸಮ್ಮೇಳನದ ಮೂಲಕ ನಾವು ಕಾಯಕಯೋಗಿಗಳಾಬೇಕು. ಮಕ್ಕಳಿಗೆ ಕನ್ನಡದಲ್ಲಿಯೇ ಶಿಕ್ಷಣ ಕೊಡಿಸವೇಕು. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಕನ್ನಡ ನಾಡು ಸಂಗೋಳ್ಳಿ ರಾಯಣ್ಣ, ಕಿತ್ತೂರ ಚೆನ್ನಮ್ಮ ಹುಟ್ಟಿದ ಗಂಡು ಮೆಟ್ಟಿನ ನೆಲವಾಗಿದೆ. ನಮ್ಮಲ್ಲಿ ಮೊದಲು ಕನ್ನಡತನ ಬೆಳೆಯುವಂತ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜೆಡಿಎಸ್ ಮುಖಂಡ ಅಶೋಕ ಪೂಜಾರಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ:. ಸಿ.ಕೆ.ನಾವಲಗಿ, ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡಿದರು. ವೇದಿಕೆ ಮೇಲೆ ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ಜಯಾನಂದ ಮುನವಳ್ಳಿ, ಸಿದ್ದಲಿಂಗ ದಳವಾಯಿ, ಶ್ಯಾಮಾನಂದ ಪೂಜೇರಿ, ಆರ್.ಡಿ.ಕಿತ್ತೂರ, ಎಸ್.ಎಸ್.ಲಗಮಪ್ಪಗೋಳ, ಪ್ರಕಾಶ ಕೋಲಾರ, ಅಶೋಕ ಲಗಮಪ್ಪಗೋಳ ಇದ್ದರು.
ಅರುಣ ಅಕ್ಕಿ ಸ್ವಾಗತಿಸಿದರು. ರಾಮಚಂದ್ರ ಕಾಕಡೆ ನಿರೂಪಿಸಿದರು. ಜಯಾನಂದ ಮಾದರ ವಂದಿಸಿದರು.
Home / Uncategorized / ಗೋಕಾಕ: ಇಲ್ಲಿಯ ಎನ್ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದರು.
Check Also
ಭಾರತ ಸೇರಿ ಏಳು ರಾಷ್ಟಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ -ಶ್ರೀಲಂಕಾ ತೀರ್ಮಾನ
Spread the loveಕೊಲಂಬೊ (ಪಿಟಿಐ): ಭಾರತ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಶುಲ್ಕರಹಿತವಾಗಿ ಪ್ರವಾಸಿ ವೀಸಾ ನೀಡಲಾಗುತ್ತದೆ ಎಂದು …