ವಿಜಯನಗರ: ಜಿಲ್ಲೆಯ ಕೊಟ್ಟೂರಿನ ಐತಿಹಾಸಿಕ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ರದ್ದು ಮಾಡಲು ನಿರ್ಧರಿಸಲಾಗಿದ್ದು, ಮಾ.7ರಂದು ನೆರವೇರಬೇಕಿದ್ದ ರಥೋತ್ಸವ ನಡೆಯುತ್ತಿಲ್ಲ. ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸುತ್ತಾರೆ. ಆದರೆ ಈ ಸಲ ಕರೊನಾ ಕರಿನೆರಳಿನ ಹಿನ್ನೆಲೆಯಲ್ಲಿ ರಥೋತ್ಸವ ರದ್ದು ಮಾಡಲಾಗಿದ್ದು, ಹೊರಗಿನ ಭಕ್ತರಿಗೂ ಪ್ರವೇಶ ನಿಷೇಧಿಸಲಾಗಿದೆ. ಬರೀ ಪೂಜಾ-ಕೈಂಕರ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಲು ಇಂದಿನ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್, ಜಿಪಂ ಸದಸ್ಯ ಹರ್ಷವರ್ಧನ, ಧರ್ಮಕರ್ತ ಗಂಗಾಧರಯ್ಯ ನೇತೃತ್ವದಲ್ಲಿ ಕೊಟ್ಟೂರಿನಲ್ಲಿ ಇಂದು ದೇವಸ್ಥಾನದ ರಥೋತ್ಸವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.
ಅವಿಭಜಿತ ಬಳ್ಳಾರಿ ಜಿಲ್ಲೆ ಸೇರಿ ದಾವಣಗೆರೆ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ನಾನಾ ಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕವೂ ಭಕ್ತರು ಬರುತ್ತಿದ್ದರು. ಆದರೆ ಕರೊನಾ ಹಿನ್ನೆಲೆಯಲ್ಲಿ ನಿಯಮ ಪಾಲನೆ ಅನಿವಾರ್ಯ ಆಗಿರುವುದರಿಂದ ಅವುಗಳಿಗೆಲ್ಲ ನಿರ್ಬಂಧ ಹೇರಲಾಗಿದ್ದು, ಕೇವಲ ಸರಳ ಪೂಜೆ-ಪುರಸ್ಕಾರಗಳನ್ನು ಮಾತ್ರ ನೆರವೇರಿಸಬೇಕು ಎಂಬುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸೂಚನೆ ನೀಡಿದರು.