ಬೆಂಗಳೂರು: ಸಿಟಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಲಕನ ಗಮನ ಬೇರೆಡೆ ಸೆಳೆದು ಕಾರಿನ ಹಿಂಬದಿ ಸೀಟಿನಲ್ಲಿ ಇರಿಸಿದ್ದ 92 ಸಾವಿರ ರೂ. ಮೌಲ್ಯದ ಬ್ಯಾಗ್ ಅನ್ನು ಖದೀಮ ಹೊತ್ತೊಯ್ದಿದ್ದಾನೆ.
ಶಾಂತಿನಗರದ ನಿವಾಸಿ ಉದ್ಯಮಿ ಸುನೀಲ್ ನೀಡಿದ ದೂರಿನ ಆಧಾರದ ಮೇರೆಗೆ ಸಿಟಿ ಮಾರುಕಟ್ಟೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫೆ.18ರಂದು ಸುನೀಲ್ ತಮ್ಮ ಕಾರು ಚಾಲಕ ಸೀಬಾ ಅಲ್ಡರ್ ಜತೆ ಬಿವಿಕೆ ಐಯ್ಯಂಗಾರ್ ರಸ್ತೆಗೆ ಬಂದು ಎಸ್ಜೆಪಿ ರಸ್ತೆಯಲ್ಲಿದ್ದ ಅಂಗಡಿಯೊಂದರ ಮುಂದೆ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದರು. ‘ನೀನು ಕಾರಿನಲ್ಲೇ ಕುಳಿತಿರು. ನಾನು ಕೆಲ ವಸ್ತು ಖರೀದಿಸಿ ಬರುವೆ’ ಎಂದು ಕಾರು ಚಾಲಕನಿಗೆ ಸುನೀಲ್ ಹೇಳಿದ್ದರು. 92 ಸಾವಿರ ರೂ. ಜತೆಗೆ ಕೆಲ ಬ್ಯಾಂಕ್ ದಾಖಲೆಗಳಿದ್ದ ಬ್ಯಾಗ್ನ್ನು ಕಾರಿನ ಹಿಂಬದಿ ಸೀಟಿನಲ್ಲಿಟ್ಟು ಹೋಗಿದ್ದರು.
ಕೆಲಸ ಮುಗಿಸಿ ಸುನೀಲ್ ಕಾರಿನ ಬಳಿ ವಾಪಸ್ ಆದಾಗ ಬ್ಯಾಗ್ ಇರಲಿಲ್ಲ. ಚಾಲಕನ್ನು ಈ ಬಗ್ಗೆ ಪ್ರಶ್ನಿಸಿದಾಗ, ‘ನೀವು ಹೋದ ಮೇಲೆ ಅಪರಿಚಿತನೊಬ್ಬ ಬಂದು, ಕಾರಿನ ಹೊರ ಭಾಗದಲ್ಲಿ 10 ರೂ. ಬಿದ್ದಿದೆ ಎಂದು ಹೇಳಿದ್ದ. ನಾನು ಕಾರಿನಿಂದ ಇಳಿದು ನೋಡಿದಾಗ 10 ರೂ. ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಆ ಹಣವನ್ನು ತೆಗೆದುಕೊಂಡು ಬಂದು ಕಾರಿನಲ್ಲಿ ಕುಳಿತುಕೊಂಡಿದ್ದೆ. ಆ ವೇಳೆ ಬ್ಯಾಗ್ ಲಪಟಾಯಿಸಿರುವ ಸಾಧ್ಯತೆಗಳಿವೆ’ ಎಂದು ತಿಳಿಸಿದ್ದ. ಸುನೀಲ್ ಸಿಟಿ ಮಾರುಕಟ್ಟೆ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರಿನ ಬಳಿ ಬಂದಿದ್ದ ಅಪರಿಚಿತ ವ್ಯಕ್ತಿ ಹಣ ಬಿದ್ದಿದೆ ಎಂದು ಹೇಳಿ ಚಾಲಕನ ಗಮನ ಬೇರೆಡೆ ಸೆಳೆದು 92 ಸಾವಿರ ರೂ. ದೋಚಿರುವುದು ಕಂಡು ಬಂದಿದೆ.
ಕಳೆದ 1 ತಿಂಗಳಿನಲ್ಲಿ ನಗರದ ವಿವಿಧೆಡೆ ಇದೇ ಮಾದರಿಯಲ್ಲಿ ಹಣ ದೋಚಿರುವ ಪ್ರಕರಣಗಳು ಸಂಭವಿಸಿದ್ದು, ಓಜಿಕುಪ್ಪಂ ಗ್ಯಾಂಗ್ನ ಸದಸ್ಯರು ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.