ಬೆಂಗಳೂರು: ರಾಜ್ಯದಲ್ಲಿ 8 ವಿವಿಧ ಸಮುದಾಯಗಳು ವಿವಿಧ ವರ್ಗಗಳ ಅಡಿಯಲ್ಲಿ ಮೀಸಲಾತಿಗಾಗಿ ಒತ್ತಾಯಿಸುತ್ತಿವೆ, ಅದರಲ್ಲೂ ಮುಖ್ಯವಾಗಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಪ್ರತಿಭಟನೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇರಿಸುಮುರುಸು ಉಂಟು ಮಾಡುತ್ತಿದೆ.
ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಬೇಕೆಂದು ದಶಕಗಳ ಹಿಂದಿನಿಂದಲೂ ಪಂಚಮಸಾಲಿ ಸಮುದಾಯ ಒತ್ತಾಯ ಮಾಡುತ್ತಲೇ ಇದೆ, ಆದರೆ ಸಮಯ- ಸಂದರ್ಭ, ಅವಕಾಶವಾದಿ ರಾಜಕಾರಣದಿಂದಾಗಿ ಹೋರಾಟ ಇದ್ದಕ್ಕಿದ್ದಂತೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸಿಎಂ ಯಡಿಯೂರಪ್ಪಅವರನ್ನು ವಿವಾದಾತ್ಮಕ ಲಿಂಗಾಯತ ನಾಯಕನ ಸ್ಥಾನದಲ್ಲಿ ತಂದು ಕೂರಿಸುತ್ತಿದೆ. ದಶಕಗಳಿಂದಲೂ ಯಡಿಯೂರಪ್ಪ ಅವರು ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ತಮ್ಮ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ಸಮುದಾಯದ ಒಂದಿಬ್ಬರು ನಾಯಕರನ್ನು ಮಂತ್ರಿ ಮಾಡಿದ್ದನ್ನು ಬಿಟ್ಟರೇ ಮತ್ತೇನು ಸಮುದಾಯ್ಕೆ ಯಾವುದೇ ಒಳ್ಳೇಯ ಕೆಲಸ ಮಾಡಿಲ್ಲಎಂಬುದು ಪ್ರಮುಖ ಆರೋಪವಾಗಿದೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ ಬಾಕಿಯನ್ನು ಮರುಪಾವತಿಸಲಿ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು. 2 ಎ ಮೀಸಲಾತಿ ಸಿಗದ ಹೊರತು ಮಠಕ್ಕೆ ಮರಳುವುದಿಲ್ಲ. ಸರ್ಕಾರದವರು ಏನು ಸುದ್ದಿ ಕೊಡಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಅರಸು ಹಲವು ಹಿಂದುಳಿದ ವರ್ಗಕ್ಕೆ ನ್ಯಾಯ ಕೊಟ್ಟರು, ಹಾಗಾಗಿ ಈಗ ನಾವು ಯಡಿಯೂರಪ್ಪ ಅವರಿಂದ ನಿರೀಕ್ಷೆ ಮಾಡುತ್ತಿದ್ದೇವೆ, ನಮಗೆ ಯಾವುದೇ ಅನುದಾನ, ನಿಗಮ ಮಂಡಳಿ ಬೇಡ. ನಮ್ಮ ಸಮುದಾಯವನ್ನು 2 ಎ ಗೆ ಸೇರಿಸಿ ಎಂದು ಮನವಿ ಮಾಡಿದರು.
ಮೀಸಲಾತಿ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದು ಸಚಿವರುಗಳಾದ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್ ಆರೋಪಿಸಿದ್ದಾರೆ, ‘ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಈ ಸಮಿತಿಯನ್ನು ರಚಿಸುವ ದಿನಾಂಕ ಈಗಲೇ ಘೋಷಿಸಬೇಕು. ಎಷ್ಟು ದಿನದಲ್ಲಿ ಸಮಿತಿಯು ವರದಿ ನೀಡಲಿದೆ ಎಂಬುದನ್ನೂ ಸ್ಪಷ್ಟಪಡಿಸಬೇಕು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಆರ್ಟಿಕಲ್ 342 ರ ಅಡಿಯಲ್ಲಿ ಮತ್ತು ಅನೇಕ ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ, ಯಾವುದೇ ಸಮುದಾಯಕ್ಕೆ ಹಿಂದುಳಿದ ವರ್ಗದ ಸ್ಥಾನಮಾನವನ್ನು ನೀಡಲು ಸರ್ಕಾರವು ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಈ ಮನವಿಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಬೇಕು, ನಂತರ ನ್ಯಾಯಾಂಗ ಪ್ರಾದಿಕಾರಕ್ಕೆ ಕಳುಹಿಸಬೇಕು, ನಂತರ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು, ಏಕಾಏಕಿ ಮೀಸಲಾತಿ ನಿರ್ದಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಮೋಹನ್ ಲಿಂಬೆಕಾಯಿ ತಿಳಿಸಿದ್ದಾರೆ.
ಸರ್ಕಾರಿ ನೇಮಕಾತಿಗಳು- ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ ಹಾಗೂ ಸಚಿವ ಸ್ಥಾನ ನೀಡುವಾಗ ಸಿಎಂ ಯಡಿಯೂರಪ್ಪ ತಮ್ಮ ಸಮುದಾಯವನ್ನು ಕಡೆಗಣಿಸಿದ ಪರಿಣಾಮ ಮೀಸಲಾತಿ ಹೋರಾಟ ತೀವ್ರವಾಯಿತು ಎಂದು ಮೂಲಗಳು ತಿಳಿಸಿವೆ.
ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕನಾಗಿರುವ ಯಡಿಯೂರಪ್ಪ ಅವರ ವರ್ಚಸ್ಸಿಗೆ ಧಕ್ಕೆ ತರಲು ಈ ಪ್ರತಿಭಟನೆ ನಡೆಯುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಮಹಾದೇವ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.