ತುಮಕೂರು, ಫೆ.10: ಕಳೆದ ಜನವರಿ 14 ರಿಂದ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸಬೇಕೆಂದು ಆಗ್ರಹಿಸಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವ ಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆ ತುಮಕೂರು ಜಿಲ್ಲೆಗೆ ಆಗಮಿಸಿದ್ದು, ಸಮುದಾಯದ ಮುಖಂಡರ ಸಭೆ ತುಮಕೂರು ನಗರದ ಶಿರಾ ಗೇಟ್ನಲ್ಲಿರುವ ಖಾಸಗಿ ಹೊಟೇಲ್ನಲ್ಲಿ ನಡೆಯಿತು.
ಸಭೆಯಲ್ಲಿ ಶ್ರೀಬಸವ ಮೃತ್ಯಂಜಯ ಸ್ವಾಮೀಜಿ, ಶ್ರೀವಚನಾನಂದಸ್ವಾಮೀಜಿ, ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರಾದ ಬಸವರಾಜ ಪಾಟೀಲ್ ಯತ್ನಾಳ್, ಲಕ್ಷ್ಮಿ ಹೆಬ್ಬಾಳ್ಕರ್, ಅರವಿಂದ್ ಬೆಲ್ಲದ್, ಗಣೇಶ್ ಹುಕ್ಕೇರಿ, ಅರುಣ್ ಪೂಜಾರ್, ಮಹೇಶ್ ಕುಮಠಳ್ಳಿ, ಕಳಕಪ್ಪ ಬಂಡಿ, ಮಾಜಿ ಶಾಸಕರಾದ ಶಿವಶಂಕರ್, ಶಿವಾನಂದಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸವರಾಜ ಪಾಟೀಲ್ ಯತ್ನಾಳ್, ಪಾದಯಾತ್ರೆ ಹೊರಟಿರುವವರನ್ನು ಬೆಂಗಳೂರಿಗೆ ಬರದಂತೆ ತಡೆಯಲು ಮುಖ್ಯಮಂತ್ರಿಯ ಮಗ ವಿಜಯೇಂದ್ರ ಹೊಸ ನಾಟಕ ಹೂಡಿದ್ದು, ಮಂತ್ರಿಗಳ ಮೂಲಕ ಸಂಧಾನಕ್ಕೆ ಮುಂದಾಗಿದ್ದಾರೆ. ಇದು ವಿಜಯೇಂದ್ರ ಕೃಪಾಪೋಷಿತ ನಾಟಕ ಮಂಡಳಿ. ಮನವೊಲಿಸುತ್ತಾರೋ, ಧನ ಒಲಿಸುತ್ತಾರೋ ನೋಡೋಣ ಎಂದು ಲೇವಡಿ ಮಾಡಿದರು.
ಸಮುದಾಯದವರು ನಿರಾಣಿಯನ್ನು ಕೇಳಿ ಪಾದಯಾತ್ರೆ ಮಾಡುತ್ತಿಲ್ಲ. ಸ್ವಾಮೀಜಿ ಕರೆ ನೀಡಿದ್ದಾರೆ ಎಂಬ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದ ಮನೆ, ಮಠ ಬಿಟ್ಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇಂದಿನ ಸಭೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕೋ, ಬೇಡವೋ ಎಂಬುದು ತೀರ್ಮಾನವಾಗಲಿದೆ. ಸಮುದಾಯದ ಮನಸ್ಸು ನೋಯಿಸುವ ಕೆಲಸವನ್ನು ಯಾರು ಮಾಡಬಾರದು. ಮಂತ್ರಿಯಾದಾ ತಕ್ಷಣ, ಮುಖ್ಯಮಂತ್ರಿಗೆ ದಾಸನಾಗಬೇಕೆಂದಿಲ್ಲ ಎಂದು ಮಾರ್ಮಿಕವಾಗಿ ತಿಳಿಸಿದರು.
Laxmi News 24×7