ಹಾವೇರಿ: ರಾಣೇಬೆನ್ನೂರು ಹುಲಿ ಅಂದರೆ ಸಾಕು ರಾಜ್ಯ ಮತ್ತು ಹೊರರಾಜ್ಯದ ಹೋರಿ ಓಡಿಸೋ ಅಖಾಡದಲ್ಲಿ ಫೇಮಸ್ ಹೆಸರು. ಒಂದು ಕೋಟಿಗೂ ಅಧಿಕ ಹಣ ಕೊಡ್ತೀನಿ ಅಂದರೂ ಮಾಲೀಕ ಮಾತ್ರ ಹೋರಿ ಕೊಟ್ಟಿರಲಿಲ್ಲ. ಅದರೆ ಇವತ್ತು ಅನಾರೋಗ್ಯದಿಂದ ಹೋರಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರ ನಗರದ ಕುರುಬಗೇರಿಯಲ್ಲಿ ನಡೆದಿದೆ.
ನಗರದ ದೆವ್ವ ಮರಿಯಪ್ಪ ಎಂಬವರು ಹತ್ತು ವರ್ಷಗಳ ಹಿಂದೆ ಹೋರಿಯೊಂದನ್ನು ಖರೀದಿ ಮಾಡಿದ್ದರು. ಈ ಹೋರಿಯನ್ನ ಕೊಬ್ಬರಿ ಹೋರಿ ಓಡಿಸೋ ಅಖಾಡಕ್ಕೆ ಬಿಡುತ್ತಿದ್ದರು. ಮೊದಲಿನಿಂದಲೂ ಅಖಾಡದಿಂದಲೇ ಹೋರಿ ಸಾಕಷ್ಟು ಫೇಮಸ್ ಆಗಿತ್ತು. ಭಾಗವಹಿಸಿದ ಕಡೆಗಳಲೆಲ್ಲಾ ಧೂಳೆಬ್ಬಿಸಿಕೊಂಡು ಯಾರ ಕೈಗೂ ಸಿಗದಂತೆ ಓಡಿ ಅಭಿಮಾನಿಗಳ ಮನಸ್ಸು ಗೆದ್ದಿತ್ತು. 25 ತೊಲೆ (250 ಗ್ರಾಂ) ಬಂಗಾರ, ಒಂದೂವರೆ ಕೆ.ಜಿ ಬೆಳ್ಳಿ, 17 ಬೈಕ್, ಫ್ರಿಡ್ಜ್, ಎತ್ತಿನ ಬಂಡಿಗಳು ಹೀಗೆ 10 ವರ್ಷದಲ್ಲಿ ನೂರಾರು ಬಹುಮಾನಗಳನ್ನ ಗೆದ್ದಿತ್ತು.
ಕೆಲವು ದಿನಗಳ ಹಿಂದಷ್ಟೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಹೋರಿ ಬೆದರಿಸೋ ಹಬ್ಬದಲ್ಲಿ ಭರ್ಜರಿಯಾಗಿ ಓಡಿತ್ತು. ಆಗ ಹೋರಿ ಕೆಳಗೆ ಬಿದ್ದಿತ್ತಂತೆ. ಅದಾದ ನಂತರದಲ್ಲಿ ಹೋರಿ ಮಾಲೀಕರು ಹೋರಿಯನ್ನ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತಡರಾತ್ರಿ ವೇಳೆಗೆ ಹೋರಿ ಬಾರದ ಲೋಕಕ್ಕೆ ತೆರಳಿದೆ. ಹೋರಿ ಮಾಲೀಕರು ಹಾಗೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ರಾಣೇಬೆನ್ನೂರು ನಗರದಲ್ಲಿ ಮೆರವಣಿಗೆ ಮಾಡುತ್ತಾ ತಮ್ಮ ಜಮೀನಿನಲ್ಲಿ ವಿಧಿವಿಧಾನಗಳ ಮೂಲಕವಾಗಿ ಹೋರಿಯ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ.
Laxmi News 24×7