ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ಅವರು ಕಲ್ಲಿದ್ದಲು ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದರೂ ಅದರ ಸದ್ಬಳಕೆ ಆಗುತ್ತಿರಲಿಲ್ಲ, ಇದೀಗ ಕಲ್ಲಿದ್ದಲು ಕ್ಷೇತ್ರದಲ್ಲಿ ಪಾರದರ್ಶಕತೆ ತರುವ ಮತ್ತು ಅದರ ಕ್ಷಮತೆಯನ್ನು ಹೆಚ್ಚಿಸುವ ಹಾಗೂ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಈ ಏಕ ಗವಾಕ್ಷಿ ಯೋಜನೆ ಅದರ ಭಾಗವಾಗಿದೆ ಎಂದು ತಿಳಿಸಿದರು.
ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಗೆ ಕಲ್ಲಿದ್ದಲು ಕ್ಷೇತ್ರ ಅತಿ ದೊಡ್ಡ ಪಾಲು ನೀಡಲಿದೆ. ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಹೊಸಬರಿಗೂ ಅವಕಾಶ ಲಭಿಸುತ್ತಿದೆ. ಕಲ್ಲಿದ್ದಲು ಕ್ಷೇತ್ರದಲ್ಲಿ ಸಮಾನತೆ ಮೂಡುತ್ತಿದೆ ಎಂದು ಹೇಳಿದರು.