ನೆಲಮಂಗಲ: ಕೊರೊನಾ ಭೀತಿಯಲ್ಲಿ ಮಾಲ್ಡೋವಾದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಿಲುಕಿ ಪರದಾಡುತ್ತಿದ್ದಾರೆ.
ರಾಜ್ಯದ ಸುಮಾರು 12 ವಿದ್ಯಾರ್ಥಿಗಳು ಮಾಲ್ಡೋವಾ ದೇಶದ Nicolae Testemiteanu state university of medicine and pharmacy ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಕೊರೊನಾ ಭೀತಿಯಿಂದ ಕಂಗಾಲಾಗಿದ್ದಾರೆ. ಮಾಲ್ಡೋವಾ ದೇಶದಲ್ಲಿ ಈಗಾಗಲೇ ಕೊರೊನಾ ವ್ಯಾಪಿಸುತ್ತಿದ್ದು, ಕ್ವೆರೆಂಟೈನ್ ಆಗಿರುವ ವಿದ್ಯಾರ್ಥಿಗಳು ಮಾಲ್ಡೋವಾದಲ್ಲಿ ಕರ್ಫೂ ಜಾರಿಯಾಗಿರುವ ಹಿನ್ನೆಲೆ ಯಾವುದೇ ದಿನನಿತ್ಯದ ಪದಾರ್ಥಗಳು ಸಿಗದೆ ಒದ್ದಾಡುತ್ತಿದ್ದಾರೆ.
ನಮ್ಮನ್ನು ರಕ್ಷಿಸಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಎಂದು ವಿದ್ಯಾರ್ಥಿಗಳೆಲ್ಲಾ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ನೆಲಮಂಗಲ ಸಮೀಪದ ಬಾಣವಾಡಿಯ ವಿದ್ಯಾರ್ಥಿ ವಿಶ್ವಾಸ್, ತರುಣ್ ಗೌಡ, ಶಶಾಂಕ್ ಮಾಲ್ಡೋವಾದಲ್ಲಿ ಸಿಲುಕಿದ್ದು, ಪಬ್ಲಿಕ್ ಟಿವಿಗೆ ವಿಡಿಯೋ ಕಳುಹಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೂಡಲೇ ನಮ್ಮ ಮನವಿಗೆ ಭಾರತ ಸರ್ಕಾರ ಸ್ಪಂಧಿಸಬೇಕಿದೆ. ಇಲ್ಲಿ ನಾವು ಮನೆಯಲ್ಲಿಯೇ ಇದ್ದೇವೆ. ಇಲ್ಲಿಂದ ಹೊರಬರದ ಪರಿಸ್ಥಿತಿ ಇದೆ. ಇಲ್ಲಿ ಕೊರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಯಾವುದೇ ರೀತಿಯ ಉಪಕರಣಗಳು ಸಿಗುತ್ತಿಲ್ಲ, ಆಹಾರ ಧಾನ್ಯಗಳು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ನಮ್ಮ ದೇಶಕ್ಕೆ ಬರಲು ಸಹಾಯ ಮಾಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.