ಬಳ್ಳಾರಿ: ಆಸ್ತಿ ವಿಚಾರವಾಗಿ ಅಣ್ಣ- ತಮ್ಮಂದಿರ ಮಧ್ಯೆ ಗಲಾಟೆ ನಡೆದಿದ್ದು, ಬಡಿಗೆ ಹಿಡಿದುಕೊಂಡು ಸಿನಿಮಾ ಶೈಲಿಯಲ್ಲಿ ಬಡಿದಾಡಿಕೊಂಡ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಬಳಿಯ ಯರ್ರಗುಂಡಿ ಗ್ರಾಮದಲ್ಲಿ ನಡೆದಿದೆ.ಹೊನ್ನಾರೆಡ್ಡಿ, ಕೃಷ್ಣಾ ರೆಡ್ಡಿ ಮತ್ತು ಶೇಷರೆಡ್ಡಿ ಎನ್ನುವ ಕುಟುಂಬದ ಸದಸ್ಯರ ನಡುವೆ ಈ ಜಗಳ ನಡೆದಿದ್ದು, ಮಹಿಳೆಯರನ್ನು ಬಿಡದೇ ಕುಟುಂಬದ ಸದಸ್ಯರು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಕುಟುಂಬದ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಮೂವರು ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ಆಸ್ತಿಗಾಗಿ ಆಗೊಮ್ಮೆ ಈಗೊಮ್ಮೆ ಜಗಳವಾಡುತ್ತಿದ್ದರು. ಇದೀಗ ಜಗಳ ವಿಕೋಪಕ್ಕೆ ತಿರುಗಿ ಇಂದು ಬಡಿಗೆಗಳನ್ನು ತೆಗೆದುಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಮೂವರು ಅಣ್ಣ-ತಮ್ಮಂದಿರ ಪೈಕಿ ಹಲವು ವರ್ಷಗಳ ಹಿಂದೆ ಇಬ್ಬರು ಮೃತಪಟ್ಟಿದ್ದು, ಕೇವಲ ಹೊನ್ನರೆಡ್ಡಿ ಮಾತ್ರ ಬದುಕಿದ್ದಾರೆ.
ಆಸ್ತಿ ವಿಚಾರದಲ್ಲಿ ಮೂವರು ಮಕ್ಕಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇತ್ತು. ಇಂದು ಭಿನ್ನಪ್ರಾಯ ಸ್ಫೋಟಗೊಂಡು ಗಲಾಟೆಯಾಗಿದೆ. ಗ್ರಾಮದಲ್ಲಿ ಮೂರು ಗುಂಪಿನ ಸದಸ್ಯರ ಬೆಂಬಲಿಗರು ಇದ್ದ ಪರಿಣಾಮ ಬಡಿದಾಟ ಮಾಡಿಕೊಳ್ಳುವ ಹಂತಕ್ಕೆ ಬಂದಿದೆ.