ವಡೋದರಾ: ಅಟಲ್ ಬಿಹಾರಿ ವಾಜಪೇಯಿ ಕಂಡ ಸರಕು ಸಾಗಣೆ ಕಾರಿಡಾರ್ ನಿರ್ಮಾಣದ ಕನಸನ್ನು ನಾವು ಈಗ ಪೂರ್ಣಗೊಳಿಸಿದ್ದೇವೆ ಎಂದು ಹೇಳುವ ಮೂಲಕ ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ನ ವಡೋದರಾದಲ್ಲಿ ನಡೆದ ‘ನಮೋ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮದಲ್ಲಿ 35,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇದರಲ್ಲಿ 2,800 ಕಿ.ಮೀ ಉದ್ದದ ಸರಕು ಸಾಗಣೆ ಕಾರಿಡಾರ್ ಲೋಕಾರ್ಪಣೆ ಮಾಡಿದ್ದು ಇದು 21ನೇ ಶತಮಾನದ ಐತಿಹಾಸಿಕ ಸಾಧನೆ ಎಂದು ಪ್ರಧಾನಿ ಬಣ್ಣಿಸಿದರು.
ಈ ಕಾರಿಡಾರ್ ಯೋಜನೆಯನ್ನು ಉಲ್ಲೇಖಿಸಿ ಬಿಜೆಪಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಹೋಲಿಸಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಈ ಯೋಜನೆಗೆ ರೂಪುರೇಷೆ ಸಿದ್ಧವಾಗಿತ್ತು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತದಲ್ಲಿ ಈ ಯೋಜನೆಗೆ ಯಾವುದೇ ಪ್ರಗತಿ ಸಿಗಲಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಕಾಮಗಾರಿಗಳಿಗೆ ವೇಗ ಸಿಕ್ಕಿತು ಎಂದರು.
ಸ್ವಾತಂತ್ರ್ಯದ ನಂತರವೂ ರೈಲ್ವೆ ಸಂಪರ್ಕವಿಲ್ಲದ ಸ್ಥಳಗಳಿಗೆ ಈ ಕಾರಿಡಾರ್ ಸಂಪರ್ಕ ಕಲ್ಪಿಸುತ್ತಿದ್ದು, ಇದು ‘ಆತ್ಮನಿರ್ಭರ ಭಾರತ’ದ ಭಾಗವಾಗಿದೆ. 2014ರ ನಂತರ ಭಾರತ 50,000 ಆಧುನಿಕ ರೈಲ್ವೆ ಬೋಗಿಗಳನ್ನು ನಿರ್ಮಿಸಿದೆ. ಆದರೆ ಹಿಂದಿನ ಸರ್ಕಾರಕ್ಕೆ 10 ವರ್ಷಗಳಲ್ಲಿ 50,000 ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಲಿಲ್ಲ. ಭಾರತವು ಈಗ ‘ಚಿಪ್ಸ್ನಿಂದ ಶಿಪ್ವರೆಗೆ’ ಎಲ್ಲವನ್ನೂ ದೇಶೀಯವಾಗಿಯೇ ತಯಾರಿಸುವ ಹೊಸ ಉತ್ಪಾದನಾ ಯುಗವನ್ನು ಪ್ರವೇಶಿಸಿದೆ ಎಂದು ಹೇಳಿದರು.
ನಾರಾಜ್ ಫೂಫಾ ಎಂದರೆ ಯಾರು?
ಮೋದಿ ಇತ್ತೀಚೆಗೆ ‘ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್’ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಯುವ ಮತದಾರರನ್ನು ಉದ್ದೇಶಿಸಿ ಮಾತನಾಡುವಾಗ ಮೊದಲ ಬಾರಿಗೆ ಈ ಪದ ಬಳಸಿದ್ದರು. ಭಾರತದ ಶೇ. 7.8 ಜಿಡಿಪಿ ಬೆಳವಣಿಗೆಯನ್ನು ಪ್ರಶ್ನಿಸಿದವರ ವಿರುದ್ಧ ವಾಗ್ದಾಳಿ ನಡೆಸುತ್ತಾ, “ಯಾವುದೇ ಕೆಲಸ ಆರಂಭವಾದ ತಕ್ಷಣ ಕೆಲವರು ‘ನಾರಾಜ್ ಫೂಫಾ’ ತರಹ ಮುನಿಸಿಕೊಳ್ಳುತ್ತಾರೆ” ಎಂದಿದ್ದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಅತಿ ಬೇಗನೆ ಕೋಪ ಮಾಡಿಕೊಳ್ಳುವ, ಸದಾ ಅಸಮಾಧಾನದಿಂದ ಇರುವ ಅಥವಾ ಎಷ್ಟು ಸಮಾಧಾನ ಮಾಡಿದರೂ ಕೇಳದ ವ್ಯಕ್ತಿಗಳನ್ನು ತಮಾಷೆಯಾಗಿ ಚಡಾಯಿಸಲು ‘ನಾರಾಜ್ ಫೂಫಾ’ ಎಂದು ಕರೆಯಲಾಗುತ್ತದೆ.
Laxmi News 24×7