ಹಾವೇರಿ: ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್ಗಳು, ಒಸಿ ಆಡಿಸುವವರು, ಸಾರಾಯಿ ಮಾರುವವರ ಜೊತೆಗೆ ಪೊಲಿಸರ ಪಾರ್ಟ್ನರ್ಶಿಪ್ ನಡೆಯುತ್ತಿದೆ. ಗಡಿ ಪಾರಾದವರು, ಗೂಂಡಾ ಲಿಸ್ಟ್ನಲ್ಲಿದ್ದವರು ಪೊಲೀಸ್ ಸ್ಟೇಷನ್ನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಈ ಸರ್ಕಾರ ಕಿತ್ತೊಗೆದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆ ಸಾಮರಸ್ಯದ ಶಾಂತಿಯ ಬೀಡು, ಸರ್ವಜ್ಞ ಕನಕದಾಸರು, ಶಿಶುನಾಳ ಶರೀಫರ ನಾಡು. ಈ ಜಿಲ್ಲೆಗೆ ಕಾಂಗ್ರೆಸ್ ಶಾಪವಾಗಿ ಬಂದಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗಡಿ ಪಾರಾದವರು, ಗೂಂಡಾ ಲಿಸ್ಟ್ನಲ್ಲಿದ್ದವರು ಪೊಲೀಸ್ ಸ್ಟೇಷನ್ನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಬಹಿರಂಗವಾಗಿ ಇಸ್ಪಿಟ್ ಅಡ್ಡಗಳು ನಡೆಯುತ್ತಿವೆ. ಬೀಡಿ ಅಂಗಡಿಯಲ್ಲಿ ಒಸಿ, ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮುಕ್ತವಾಗಿ ಸಿಗುವಂತಹ ದುಸ್ಥಿತಿ ಜಿಲ್ಲೆಯಲ್ಲಿದೆ ಎಂದು ಆರೋಪಿಸಿದರು.
ಹಾವೇರಿ ಜಿಲ್ಲೆಯಲ್ಲಿ ಎಲ್ಲಾ ಕಾಲೇಜುಗಳಲ್ಲಿ ಎಲ್ಲಿ ಹೋದಲ್ಲಿ ಡ್ರಗ್ಸ್ ಇದೆ. ಎಸ್ಪಿ ಆಫೀಸಿಗೆ ಮುತ್ತಿಗೆ ಹಾಕಿದಾಗ ಎರಡು ದಿನ ಸರಿ ಮಾಡುವುದಾಗಿ ಹೇಳಿದರು. ಯಾವುದೇ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿಲ್ಲ. ನಿರಂತರವಾಗಿ ಇಸ್ಪಿಟ್ ಆಡುವವರು, ಡ್ರಗ್ಸ್ ಮಾರುವವರು, ಒಸಿ, ಸಾರಾಯಿ ಮಾರುವವರ ಜೊತೆಗೆ ಪೊಲಿಸರ ಪಾರ್ಟ್ನರ್ಶಿಪ್ ನಡೆಯುತ್ತಿದೆ. ಮುಖ್ಯಮಂತ್ರಿಗಳೇ ಏಜೆಂಟ್ಗಳಿಗೆ ಯೂನಿಫಾರ್ಮ್ ಕೊಟ್ಟು ಬಿಡಿ. ಪೊಲಿಸ್ ಅಧಿಕಾರಿಗಳನ್ನು ಮನೆಯಲ್ಲಿಯೇ ಕೂರಿಸಿ ಏಜೆಂಟ್ಗಳಿಗೆ ಅಧಿಕಾರ ಕೊಡಿ. ಇದೇ ರೀತಿ ಮುಂದುವರೆದರೆ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಿಡಿಕಾರಿದರು.
ಒಬಿಸಿಗಳ ಮೇಲೆ ಅಪರಾಧ ಕೃತ್ಯ:
ಸವಣೂರು ತಾಲೂಕಿನಲ್ಲಿ ಒಬ್ಬ ಶಿಕ್ಷಕರನ್ನು ಬೆತ್ತಲೆ ಮಾಡಿ ಪೊಲೀಸ್ ಸ್ಟೇಷನ್ವರೆಗೂ ಹೊಡೆದುಕೊಂಡು ಹೋದರೂ ಯಾರನ್ನೂ ಬಂಧಿಸಲಿಲ್ಲ. ಶಿಗ್ಗಾವಿಯಲ್ಲಿ ಹಗಲು ಹೊತ್ತಿನಲ್ಲೇ ಕೊಲೆ ಮಾಡಿದರೂ, ರಾಜಿ ಮಾಡುವ ಕೆಲಸ ಮಾಡಿದ್ದಾರೆ. ಹಾನಗಲ್ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ ಆರೋಪಿಗಳು ಬೇಲ್ ಮೇಲೆ ಹೊರಗೆ ಬಂದರೆ ಅವರ ಮೆರವಣಿಗೆ ಮಾಡಿದರು. ಹಾನಗಲ್ ತಾಲೂಕಿನ ನರೆಗಲ್ನಲ್ಲಿ ಕೈ ಕತ್ತರಿಸಿದ್ದಾರೆ. ರಟ್ಟಿ ಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಶಿವಾಜಿ ಎನ್ನುವವರನ್ನು ಹಾಡಹಗಲೇ ಕೊಲೆ ಮಡಿದ್ದಾರೆ. ರಾಣೆಬೆನ್ನೂರಿನಲ್ಲಿ ಕಸಾಯಿ ಖಾನೆ ಬಂದ್ ಮಾಡುವಂತೆ ಹೋರಾಟ ಮಾಡಿದ ಬಜರಂಗ ದಳ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಇವೆಲ್ಲ ದೌರ್ಜನ್ಯ ಮಾಡಿರುವವರು ಡಿ.ಕೆ.ಶಿವಕುಮಾರ್ ಅವರ ಕುಕ್ಕರ್ ಬ್ರದರ್ಸ್. ಅವರಿಗೆ ಪೊಲಿಸರು ರಕ್ಷಣೆ ನೀಡುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದವರು ಎಲ್ಲರೂ ಹಿಂದುಳಿದ ವರ್ಗದವರು. ಶಿಗ್ಗಾವಿ, ಸವಣೂರು, ರಟ್ಟಿಹಳ್ಳಿ ಹಾನಗಲ್, ರಾಣೆಬೆನ್ನೂರಿನಲ್ಲಿ ಒಬಿಸಿ ಸಮುದಾಯದವರ ಮೇಲೆ ದೌರ್ಜನ್ಯ, ರೇಪ್, ಕೊಲೆ ಮಾಡಿದ್ದಾರೆ. ಡಿಕೆ ಅವರ ಕುಕ್ಕರ್ ಬ್ರದರ್ಸ್ ಒಬಿಸಿ ಮಕ್ಕಳ ಮೇಲೆ ಸಾಮಾನ್ಯ ಜನರ ಮೇಲೆ ದೌರ್ಜನ್ಯ, ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ದೂರಿದರು.
ಎಲ್ಲಿದ್ದೀರಿ ಸಿದ್ದರಾಮಯ್ಯ?
ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಸಿದ್ದರಾಮಯ್ಯನವರೇ ಎಲ್ಲಿದೆ ನಿಮ್ಮ ಅಹಿಂದ ಎಂದು ಪ್ರಶ್ನಿಸಿದರು. ಮತ ಹಾಕಿಸಿಕೊಳ್ಳಲು ಮಾತ್ರ ಅಹಿಂದನಾ? ಕೊಲೆಯಾಗುತ್ತಿದೆ, ಕೈ ಕತ್ತರಿಸಿದ್ದಾರೆ, ನೀವೆಲ್ಲಿದ್ದೀರಿ? ಇವತ್ತಿನ ಸರ್ಕಾರ ಕುಕ್ಕರ್ ಬ್ರದರ್ಸ್ನ ರಕ್ಷಣೆ ಮಾಡುವ ವ್ಯವಸ್ಥೆಗೆ ಮುಂದಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತು ಹೋಗಿದೆ. ಎಲ್ಲ ವ್ಯವಸ್ಥೆಯನ್ನು ಏಜೆಂಟ್ಗಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಯ ಎಸ್ಪಿ, ಡಿವೈಎಸ್ಪಿ ಎಲ್ಲರೂ ದುಡ್ಡು ಕೊಟ್ಟು ಬಂದಿದ್ದಾರೆ. ಪೊಲೀಸರ ಹರಾಜು ನಡೆದಿದೆ. ಸಾಮಾನ್ಯ ಜನರಿಗೆ ನ್ಯಾಯ ಬೇಕು, ಎಸ್ಸಿ, ಎಸ್ಟಿ, ಒಬಿಸಿ ಜನರಿಗೆ ಹೆಣ್ಣು ಮಕ್ಕಳಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು.
ರೈತರ ಸ್ಥಿತಿ ಗಂಭೀರ:
ರಾಜ್ಯದಲ್ಲಿ ರೈತರ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರದವರು ರೈತರಿಗೆ ನಯಾಪೈಸೆ ಕೊಡದೇ ಬರಗಾಲ ನಿರ್ವಹಣೆ ಮಾಡುತ್ತಿದ್ದಾರೆ. ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರೈತರಿಗೆ ಪರಿಹಾರ ಕೊಡಲು ಆಗಲಿಲ್ಲ ಇವರಿಗೆ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಎರಡು ಪಟ್ಟು ಪರಿಹಾರ ನೀಡಿದರು. ನಾವು ಪ್ರವಾಹ ಬಂದಾಗ ಒಣ ಭೂಮಿಗೆ 6.5 ಸಾವಿರ ಬದಲು 13 ಸಾವಿರ ಕೊಟ್ಟೆವು. ನೀರಾವರಿಗೆ 18 ಸಾವಿರ, ತೋಟಗಾರಿಕೆ ಬೆಳೆಗೆ 25 ಸಾವಿರ ಪರಿಹಾರ ಕೊಟ್ಟೆವು ಎಂದು ಹೇಳಿದರು.
ಡಿಕೆ ಕನಸು ಕಾಣುತ್ತಿದ್ದಾರೆ:
ಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಡದಿ ಯೋಜನೆ ಕುಮಾರಸ್ವಾಮಿ ಯೋಜನೆ ಅಂತ ಹೇಳಿದ್ದಾರೆ. ಅವರ ಕನಸನ್ನು ನನಸು ಮಾಡಲು ನಿಮ್ಮದೇನು ಹಿತಾಸಕ್ತಿ ಇದೆ? ಕುಮಾರಸ್ವಾಮಿ ಕನಸಿನಲ್ಲಿ ಡಿ.ಕೆ.ಶಿವಕುಮಾರ್ ಕನಸು ಕಾಣುತ್ತಿದ್ದಾರೆ ಎಂದರು. ಇದು ಹೋರಾಟದ ಪ್ರಾರಂಭ, ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲು ಎಲ್ಲರೂ ಸನ್ನದ್ಧರಾಗಬೇಕು, ಈ ಸರ್ಕಾರ ಕಿತ್ತೊಗೆದು ಬಿಜೆಪಿ ಸರ್ಕಾರವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ರಚನೆ ಮಾಡಬೇಕು ಎಂದು ಕರೆ ನೀಡಿದರು.
ವಿಜಯೇಂದ್ರ ಕೈ ಬಲಪಡಿಸಿ:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಯುವಕರಿಗೆ ಶಕ್ತಿ ತುಂಬಲು ಇವತ್ತು ಹೋರಾಟಕ್ಕೆ ಬಂದಿದ್ದಾರೆ. ಅವರಿಗೆ ಜಿಲ್ಲೆಯ ಪರವಾಗಿ ಧನ್ಯವಾದ ತಿಳಿಸಿದ ಅವರು, ಬಿಜೆಪಿ ಈ ಸರ್ಕಾರವನ್ನು ಕಿತ್ತೊಗೆದು ಪರ್ಯಾಯ ಶಕ್ತಿಯಾಗಿ ಬೆಳೆಯಲಿದೆ. ವಿಜಯೇಂದ್ರ ಅವರು ರಾಜ್ಯಾದ್ಯಂತ ಓಡಾಡಿ ಹೋರಾಟ ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸುವ ಕೆಲಸ ಮಾಡೋಣ. ಬದಲಾವಣೆಯ ಗಾಳಿ ಬೀಸುತ್ತಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟಕ್ಕೆ ಹೋರಾಟವನ್ನು ತೆಗೆದುಕೊಂಡು ಹೋಗುತ್ತೇವೆ. ಅಧಿಕಾರಿಗಳು ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು. ರಾಜಕೀಯ ಒತ್ತಡಕ್ಕೆ ಮಣಿದರೆ ನಿಮಗೆ ಸಂಕಷ್ಟ ಕಾದಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೆಂದ್ರ, ಮಾಜಿ ಸಚಿವ ಬೈರತಿ ಬಸವರಾಜ್ ಸೇರಿದಂತೆ ಪಕ್ಷದ ಹಲವಾರು ಪ್ರಮುಖರು ಹಾಜರಿದ್ದರು.
Laxmi News 24×7