Breaking News

ಜು.10ರಿಂದ ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ

Spread the love

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಬೆಳಗಾವಿಯಲ್ಲಿ  ಜು.10ರಿಂದ 12ರವರೆಗೆ ನಡೆಯಲಿದೆ.
ಈ ಸಭೆಯಲ್ಲಿ ದೇಶವ್ಯಾಪ್ತಿಯ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು ಹಾಗೂ ಸಂಘದ ಸಂಘಟನಾ ವ್ಯವಸ್ಥೆಯ 11 ಕ್ಷೇತ್ರಗಳು, 46 ಪ್ರಾಂತಗಳ ಕಾರ್ಯಕರ್ತರು ಜತೆಗೆ ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಹರಿಯಾಣದ ಸಮಾಲ್ಖಾದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನಂತರ, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳಲ್ಲಿ ದೇಶದಾದ್ಯಂತ ವಿವಿಧ ಹಂತಗಳ ಸಂಘ ಶಿಕ್ಷಣ ವರ್ಗಗಳು ಯಶಸ್ವಿಯಾಗಿ ನಡೆದಿವೆ. ಇದರ ಮುಂದುವರಿದ ಭಾಗವಾಗಿ ಈ ಸಭೆಯಲ್ಲಿ ಶಾಖಾ ಮಟ್ಟದಲ್ಲಿ ವಾರ್ಷಿಕ ಕಾರ್ಯ ಯೋಜನೆ ಅನುಷ್ಠಾನ ಕುರಿತು ಚರ್ಚೆ ನಡೆಯಲಿದೆ.
ಸಂಘ ಶತಮಾನೋತ್ಸವದ ಅಂಗವಾಗಿ ನಡೆದಿರುವ ಶಾಖಾ ಕಾರ್ಯದ ವಿಸ್ತರಣೆ ಪರಿಶೀಲನೆ ಹಾಗೂ ಮುಂದಿನ ದಿನಗಳಲ್ಲಿ ಶಾಖೆಗಳ ಸಂಖ್ಯೆ ಇನ್ನಷ್ಟು ಗರಿಷ್ಠ ಮಟ್ಟಕ್ಕೆ ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ. ಅಲ್ಲದೆ, 2026ರ ಸಂಘ ಶಿಕ್ಷಣ ವರ್ಗಗಳ ವಿಮರ್ಶೆ, ಶತಾಬ್ದಿ ವರ್ಷದಲ್ಲಿ ಪೂರ್ಣಗೊಂಡ ಕಾರ್ಯಕ್ರಮಗಳ ಅವಲೋಕನ, ಉಳಿದಿರುವ ಕಾರ್ಯಕ್ರಮಗಳ ಯೋಜನೆ ಹಾಗೂ ಸರಸಂಘಚಾಲಕರ 2026-27ರ ಪ್ರವಾಸ ಯೋಜನೆ ಕುರಿತು ಚರ್ಚೆಗಳಾಗಲಿವೆ.
ಸಭೆಯಲ್ಲಿ ಭಾಗವಹಿಸುವ ಪ್ರಚಾರಕರು ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿ ಹಾಗೂ ಜನಗಣತಿ ಸೇರಿದಂತೆ ಸಮಕಾಲೀನ ಪ್ರಮುಖ ವಿಷಯಗಳ ಕುರಿತು ಅನುಭವ ಹಂಚಿಕೊಳ್ಳಲಿದ್ದು, ಅವುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ ಅಂಬೇಕರ ತಿಳಿಸಿದ್ದಾರೆ.
ಕಾರ್ಯಕಾರಿಣಿಯಲ್ಲಿ ಭಾಗಿಯಾಗುವ ಪ್ರಮುಖರು ಸಭೆಯಲ್ಲಿ ಸರಸಂಘಚಾಲಕ ಡಾ.ಮೋಹನ ಭಾಗವತ, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹರಾದ ಡಾ.ಕೃಷ್ಣಗೋಪಾಲ, ಸಿ.ಆರ್.ಮುಕುಂದ, ಅರುಣಕುಮಾರ, ರಾಮದತ್ತ, ಆಲೋಕ ಕುಮಾರ, ಅತುಲ ಲಿಮಯೆ ಹಾಗೂ ಅಖಿಲ ಭಾರತೀಯ ಕಾರ್ಯ ವಿಭಾಗ ಪ್ರಮುಖರು, ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ. ಸಭೆ ಹಿನ್ನೆಲೆಯಲ್ಲಿ ಸರಸಂಘಚಾಲಕ ಡಾ.ಮೋಹನ ಭಾಗವತ ಜು.6ರಂದೇ ಬೆಳಗಾವಿಗೆ ಆಗಮಿಸಲಿದ್ದಾರೆ.

Spread the love

About Laxminews 24x7

Check Also

ಮರದ ರೆಂಬೆ ಬಿದ್ದು ಎರಡು ಕಾರುಗಳು ಜಖಂ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರದ ರೆಂಬೆಯೊಂದು ಬಿದ್ದು ಎರಡು ಕಾರು ಹಾಗೂ ಒಂದು ಸ್ಕೂಟಿ ಜಖಂಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ