ಬೆಂಗಳೂರು(ಜುಲೈ 21): ನಗರದಲ್ಲಿ ನಿನ್ನೆ ಸಂಜೆಯ ನಂತರದಿಂದಲೂ ವಿವಿಧೆಡೆ ಭಾರೀ ಮಳೆಯಾಗಿದೆ. ತಗ್ಗಿದ ಪ್ರದೇಶಗಳು ಬಹಳ ಹೊತ್ತು ಜಲಾವೃತಗೊಂಡವು. ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ. ದಾಸರಹಳ್ಳಿ ಪ್ರದೇಶಗಳಲ್ಲಿ ಮಳೆ ನೀರು ಹಲವು ಅಪಾರ್ಟ್ಮೆಂಟ್, ಮನೆಗಳಿಗೆ ನುಗ್ಗಿತ್ತು. ಇಲ್ಲಿಯ ರಸ್ತೆಗಳು ಕೆರೆಯಂತಾದವು.
ಆರ್.ಟಿ. ನಗರದಲ್ಲಿ ಬಾಲಕಿಯೊಬ್ಬಳು ವಿದ್ಯುತ್ ಶಾಕ್ನಿಂದ ಮೃತಪಟ್ಟ ದುರಂತ ಘಟನೆಯೂ ನಿನ್ನೆ ರಾತ್ರಿ ಸಂಭವಿಸಿದೆ. ಕಾವಲ್ ಬೈರಸಂದ್ರದಲ್ಲಿ 8 ವರ್ಷದ ಫಾತಿಮಾ ಮೃತಪಟ್ಟ ಬಾಲಕಿ. ನಿನ್ನೆ ರಾತ್ರಿ 8ಗಂಟೆಯ ಸಮಯದಲ್ಲಿ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ವಿದ್ಯುತ್ ಕಂಬ ಮುಟ್ಟಿ ಶಾಕ್ ಹೊಡೆದು ಅಸುನೀಗಿದ್ದಾಳೆ. ಮಳೆಯಿಂದಾಗಿ ಆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿತ್ತೆನ್ನಲಾಗಿದೆ.
ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ ದಾಸರಹಳ್ಳಿ ಹಾಗೂ ಸುತ್ತಮುತ್ತ ಮಳೆಯ ರುದ್ರನರ್ತನವಾಗಿತ್ತು. ದಾಸರಹಳ್ಳಿಯ ಚೊಕ್ಕಸಂದ್ರದ ರುಕ್ಮಿಣಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿಯ ರಸ್ತೆಗಳು ಕರೆಯಂತಾಗಿ ಸ್ಥಳೀಯರು ಪರದಾಡುವಂತಾಯಿತು. ತಗ್ಗಿದ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನರು ಕಂಗಾಲಾದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಅವರಂತೂ ಬಿಬಿಎಂಪಿ ಕಚೇರಿಯ ಕಂಟ್ರೋಲ್ ರೂಮ್ನಲ್ಲೇ ತಡರಾತ್ರಿಯವರೆಗೆ ಕುಳಿತು ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರು. ಆದರೆ, ಯಾವೊಬ್ಬ ಅಧಿಕಾರಿಯೂ ಬರಲಿಲ್ಲ ಎಂದು ಶಾಸಕರು ಇಂದು ಬೆಳಗ್ಗೆ ಮಾಧ್ಯಮಗಳೆದುರು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಆರ್ ಮಂಜುನಾಥ್ ಅವರು ಚೊಕ್ಕಸಂದ್ರ, ಬೆಲ್ಮಾರ್, ರುಕ್ಮಿಣಿ ನಗರ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರುಕ್ಮಿಣಿ ನಗರದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಕಂಡು ಬಂದಿತು. ಸ್ಥಳೀಯರು ಶಾಸಕರೆದುರು ಕೋಪ ತೋಡಿಕೊಂಡರು. ಪ್ರತೀ ವರ್ಷ ಇದೇ ರೀತಿ ಆಗುತ್ತಿದೆ ಎಂದು ಪ್ರತಿಭಟಿಸಿದರು. ಮೈತ್ರಿಸರ್ಕಾರದ ವೇಳೆ ರಾಜಕಾಲುವೆಗೆ ಬಿಡುಗಡೆ ಮಾಡಿದ್ದ ಹಣವನ್ನು ಈ ಸರ್ಕಾರ ವಾಪಸ್ ಪಡೆದಿದ್ದಾರೆ ಎಂದು ಶಾಸಕರು ತಮ್ಮ ಹತಾಶೆ ತೋರ್ಪಡಿಸಿದರು.