ಸವದತ್ತಿ: ಚುಳಕಿ ಗ್ರಾಮದ ರೈತರಿಗೆ ಜಮೀನುಗಳಿಗೆ ತೆರಳಲು ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ರೈತರು ನಗರದಲ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಎನ್.ಮಠದ ಹಾಗೂ ಡಿವೈಎಸ್ಪಿ ಚಿದಂಬರ ಮಡಿವಾಳಗೆ ಮಂಗಳವಾರ ಮನವಿ ಸಲ್ಲಿಸಿದರು.
ಸವದತ್ತಿ-ನರಗುಂದ ಮುಖ್ಯರಸ್ತೆ ಪಕ್ಕದ ಸರ್ವೇ ನಂ.661/1ರ ಬಳಿ ಇರುವ ರಸ್ತೆ ಮೂಲಕ ರೈತರು ಹಲವು ವರ್ಷಗಳಿಂದ ತಮ್ಮ ಜಮೀನುಗಳಿಗೆ ತೆರಳುತ್ತಾರೆ. ಈಚೆಗೆ ಖಾಸಗಿ ಭೂ ಮಾಲೀಕರೊಬ್ಬರು ಈ ರಸ್ತೆ ತಮ್ಮ ಜಮೀನಿನಲ್ಲಿದ್ದು, ಯಾರೂ ಇಲ್ಲಿ ಹಾದು ಹೋಗಬಾರದೆಂದು ತಡೆಯೊಡ್ಡುತ್ತಿದ್ದಾರೆ. ಸುಮಾರು 80 ಎಕರೆ ಪ್ರದೇಶದ ರೈತರು ನಿತ್ಯ ಕೃಷಿ ಚಟುವಟಿಕೆಗಳಿಗೆ ಈ ಮಾರ್ಗ ಅವಲಂಬಿಸಿದ್ದಾರೆ. ಬಿತ್ತನೆ ಹಂಗಾಮು ಆರಂಭವಾಗಿರುವ ಸಮಯದಲ್ಲಿ ರಸ್ತೆ ಬಂದ್ ಮಾಡಿರುವುದರಿಂದ ಕಷಿ ಕೆಲಸಗಳಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ಸುಮಾರು ಆರು ಅಡಿ ಎತ್ತರದ ಮಣ್ಣಿನ ತಡೆ ನಿರ್ಮಿಸಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ದೂರಿದರು.
ಗ್ರಾಮದ ಹಿರಿಯರು ಹಲವು ಬಾರಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜೂ.16ರಂದು ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲೂ ರೈತರಿಗೆ ಬೆದರಿಕೆ ಹಾಕಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ರಸ್ತೆ ಸೌಲಭ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ. ಅರುಣ ಇಡಗಲ್ಲ, ನಾಮದೇವ ಹರ್ಲಾಪುರ, ಈರಯ್ಯ ಮಠಪತಿ, ತಿಪ್ಪಣ್ಣ ಹಂಚಿನಾಳ, ಕೀರಪ್ಪ ದೊಡ್ಡಮನಿ, ಮೈಲಾರಿ ಚಿಕ್ಕನವರ, ದೇವಪ್ಪ ಚಿಕ್ಕನವರ ಇತರರಿದ್ದರು.
Laxmi News 24×7