ಬೆಳಗಾವಿ : ರಾಜ್ಯ ಸರ್ಕಾರದ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ನಗರದಲ್ಲಿ ವಿವಿಧ ವ್ಯಾಪಾರ ಮತ್ತು ಕೈಗಾರಿಕಾ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ನಗರದ ಚನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಎಲ್ಲ ವ್ಯಾಪಾರಿ, ಉದ್ಯಮಿಗಳು ಹಾಗೂ ಸಂಘಟನೆಗಳ ಸದಸ್ಯರು ಒಗ್ಗೂಡಿ ಸಭೆ ನಡೆಸಿದರು. ಬಳಿಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ರಿಗೆ ಮನವಿ ಸಲ್ಲಿಸಿದರು.
ಕನಿಷ್ಠ ವೇತನ ಹೆಚ್ಚಳದಿಂದ ವ್ಯಾಪಾರ, ಕೈಗಾರಿಕೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಈ ಆದೇಶ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಮಾತನಾಡಿ, ಈಗಾಗಲೇ ಉದ್ಯಮಗಳು ಬೆಲೆ ಏರಿಕೆಯಿಂದ ತತ್ತರಿಸಿವೆ. ಪುನಃ ಕನಿಷ್ಠ ವೇತನವನ್ನು ಹೆಚ್ಚಿಸಿದರೆ ಬಹಳಷ್ಟು ಉದ್ಯಮಗಳು ಬಾಗಿಲು ಹಾಕಬೇಕಾಗುತ್ತದೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ಉಲ್ಬಣವಾಗಲಿದೆ. ಯಾವುದೇ ಕಾರಣಕ್ಕೂ ಈಗ ಆದೇಶಿಸಿರುವ ಕನಿಷ್ಠ ವೇತನ ನಿಯಮವನ್ನು ಜಾರಿಗೆ ತರಬಾರದು. ಹಂತ ಹಂತವಾಗಿ ಹೆಚ್ಚಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಒಮ್ಮೆಲೆ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚ್ಜಿಸುವುದು ಉದ್ಯಮಗಳಿಗೆ ದೊಡ್ಡ ಹೊಡೆತ ನೀಡುತ್ತದೆ ಎಂದು ಅಳಲು ತೋಡಿಕೊಂಡರು.
ಸತೀಶ ಕುಲಕರ್ಣಿ, ಬಸವರಾಜ ಜವಳಿ, ಸತೀಶ ನೆರ್ಲೇಕರ, ಪ್ರಶಾಂತ ಪಾಟೀಲ, ಎಂ.ಕೆ.ಹೆಗಡೆ, ವಿಕಾಸ ಕಲಘಟಗಿ ಇತರರಿದ್ದರು.
Laxmi News 24×7