ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ, 25 ಲಕ್ಷ ಮಕ್ಕಳ ಕಾಲಡಿಗೆ ನುಸುಳಿ ಬರಲಿ ಆಗ ಈ ಆದೇಶದ ಬಗ್ಗೆ ಉತ್ತರಿಸ್ತಿನಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ಹೊರಹಾಕಿದ್ದಾರೆ.
ಹಿಜಬ್ಗೆ ಶಾಲಾ-ಕಾಲೇಜುಗಳಲ್ಲಿ ಅವಕಾಶ ಕೊಟ್ಟಿದ್ದನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಂಡು ಅಲ್ಪಸಂಖ್ಯಾತರ ಓಲೈಸಲು ಮಾಡಿದ್ದಾರೆ ಎಂಬ ಆರೋಪದ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಹಿಜಬ್ ಮಾತ್ರ ಅಲ್ಲ. ಇದಕ್ಕೂ ಮುನ್ನ ನಾನು ಶಿವದಾರ ಹಾಗೂ ಜನಿವಾರದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೆ, ಹಾಗಾದ್ರೆ ಇವರೆಲ್ಲ ಅದರ ವಿರೋಧಿಗಳಾ?, ಕಣ್ಣಿಗೆ ಇದೊಂದೇ ಕಾಣಿಸುತ್ತಾ? ಇದರ ಬಗ್ಗೆ ಮಾತಾಡೋರು ನೀಟ್ ಪರೀಕ್ಷೆ ಬಗ್ಗೆ ಮಾತಾಡಲಿ. ನೀಟ್ ಪಶ್ನೆಪತ್ರಿಕೆ ಲೀಕ್ನಿಂದಾಗಿ 25 ಲಕ್ಷ ಮಕ್ಕಳನ್ನು ಬೀದಿಗೆ ತಂದಿದ್ದಾರಲ್ಲ, ಅವರ ಕಾಲಡಿಗೆ ನುಸುಳಿ ಬರಲಿ, ಆಗ ಈ ಆದೇಶದ ಬಗ್ಗೆ ಉತ್ತರ ಕೊಡುತ್ತೇನೆಂದು ಕಿಡಿಕಾರಿದ್ದಾರೆ.
ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ, ಜಾತಿ, ಧರ್ಮ ಓಲೈಸುವ ಮಾತಲ್ಲ. ಅದರಂತೆ ಮಾಡ್ತಾ ಇದ್ದೇವೆ. ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ. ಬಿಜೆಪಿ ನಾಯಕರು, ವಿರೋಧ ಮಾಡೋರು ಕೇಂದ್ರೀಯ ವಿದ್ಯಾಲಯದ ಮುಂದೆ ವಿರೋಧಿಸಲಿ. ಮಹಾರಾಷ್ಟ್ರದಲ್ಲಿ ಹೋಗಿ ಪ್ರತಿಭಟನೆ ಮಾಡಲಿ. ಕೇಂದ್ರ ಸರ್ಕಾರ ಮಾಡಿರುವ ಕಾನೂನನ್ನೇ ನಾನು ಈಗ ತಂದಿದ್ದೇನೆ. ಇದೇನು ಹೊಸದಲ್ಲ. ಜಾಸ್ತಿ ಫಲಿತಾಂಶ ಬಂತು ಅಂತ ಹೊಟ್ಟೆ ಕಿಚ್ಚಿಗೆ ಇವರೆಲ್ಲ ಹೀಗೆ ಮಾಡ್ತಿದ್ದಾರೆ. ಯಾರ ಓಲೈಕೆಗೆ ಆದೇಶ ಮಾಡಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಆದೇಶ ಮಾಡಿದ್ದೇನೆ, ವಾಪಸ್ ಪಡೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ನೀಟ್ ಪರೀಕ್ಷೆ ಲೀಕ್ ಬಗ್ಗೆ ಮಾತನಾಡಿದ ಅವರು, ಇದರ ಬಗ್ಗೆ ಯಾರೂ ಉತ್ತರ ಕೊಡಬೇಕಿತ್ತೋ ಧರ್ಮೇಂದ್ರ ಪ್ರಧಾನ್ ಅವರೇ ಓಡಿ ಹೋಗಿದ್ದಾರೆ. ಈ ಮಕ್ಕಳ ವಿರುದ್ಧ ಕಳ್ಳರ ರೀತಿ ಹೋದವರ್ಯಾರು? ಇನ್ನೂ ಮೋದಿಯವರು ಪರೀಕ್ಷಾ ಪೇ ಚರ್ಚಾ ಮಾಡಿದ್ರು, 25 ಲಕ್ಷ ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಅಲ್ಲದೇ ಆರ್ಥಿಕವಾಗಿ ನಾವೆಲ್ಲ ನೋಡಿಕೊಳ್ಳುತ್ತೇವೆ ಅಂತಾರೆ, ಹಾಗಾದ್ರೆ ಮಕ್ಕಳ ಭಾವನೆ, ಒತ್ತಡ, ಒಂದು ವರ್ಷ ಓದಿದ್ದು ಎಲ್ಲಿ ಹೋಯ್ತು? ಇದರ ಬಗ್ಗೆ ಯಾರು ಉತ್ತರ ಕೊಡ್ತಾರೆ. ಬಹುಸಂಖ್ಯಾತ ಹಿಂದೂಗಳ ಪರ ಕಾನೂನು ಮಾಡಿರೋದನ್ನು ಬಿಟ್ಟು ವೈಯಕ್ತಿಕ ವಿಚಾರದ ಬಗ್ಗೆ ಹೋರಾಟ ಮಾಡಿದ್ರೆ ಅದಕ್ಕೆ ಯಾವುದೇ ಅರ್ಥ ಇರೋದಿಲ್ಲ. ಉತ್ತರ ಬೇಕು ಅಂದರೆ 25 ಲಕ್ಷ ಮಕ್ಕಳು ಬೀದಿಗೆ ಬಂದಿದ್ದಾರಲ್ಲ ಅವರ ಕಾಲಡಿಗೆ ನುಸುಳಿ ಬರಲಿ, ನಾನು ಉತ್ತರ ಕೊಡ್ತೀನಿ ಅಂತ ವಾಗ್ದಾಳಿ ನಡೆಸಿದ್ದಾರೆ.
Laxmi News 24×7