ಬೆಳಗಾವಿ : ಬಿಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ ನಷ್ಟದಲ್ಲಿರುವ ಕೆಲವು ಕಾರ್ಖಾನೆ ಮತ್ತು ಉದ್ಯಮಗಳಿಗೆ ಕೋಟ್ಯಂತರ ರೂಪಾಯಿ ಸಾಲ ಕೊಡಲು ಮುಂದಾಗಿದ್ದ, ಇದು ಬ್ಯಾಂಕಿನ ಭವಿಷ್ಯಕ್ಕೆ ಮಾರಕವಾಗಲಿದ್ದು, ಆಡಳಿತ ಮಂಡಳಿ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಮುಂಬರುವ ಸಭೆಯಲ್ಲಿ ಸಾಲ ಮಂಜೂರಾತಿಗಾಗಿ ಈಗಾಗಲೇ ಅನೇಕ ಸಕ್ಕರೆ ಕಾರ್ಖಾನೆಗಗಳು ಹಾಗೂ ಕೆಲ ರಾಜಕಾರಣಿಗಳು ಜಮೀನು ಪತ್ರ ಮುಂದಿಟ್ಟುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬಹುತೇಕ ಉದ್ಯಮಗಳೆಲ್ಲವೂ ನಷ್ಟದಲ್ಲಿವೆ. ಅಂತಹುದಕ್ಕೆ ಸಾಲ ಕೊಟ್ಟು ಏನು ಮಾಡಲು ಹೊರಟಿದ್ದಾರೆ ಗೊತ್ತಿಲ್ಲ. ಆಯಾ ಕಾರ್ಖಾನೆಗಳ ಆಸ್ತಿ ದಾಖಲೆಗಳನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಸಾಲ ಕೊಡುವುದಾಗಬೇಕು ಎಂದು ಒತ್ತಾಯಿಸಿದರು.
ಈ ಬ್ಯಾಂಕ್ ರೈತರ ಶ್ರೇಯೋಭೀವೃದ್ಧಿಗಾಗಿ ಇದೆ. ಆದರೆ ರೈತರಿಗೆ ಹೆಚ್ಚಿನ ಸಾಲ ಕೊಡುವುದನ್ನು ಬಿಟ್ಟು ರಾಜಕಾರಣಿಗಳು ತಮ್ಮ ಅನುಕೂಲಕ್ಕಾಗಿ ಬೀಗ ಹಾಕುವ ಸ್ಥಿತಿಯಲ್ಲಿರುವ ಕಾರ್ಖಾನೆಗಳಿಗೆ ಸಾಲ ಕೊಡಲು ಮುಂದಾಗುತ್ತಿದ್ದಾರೆ. ಇದು ಬ್ಯಾಂಕಿನ ಭವಿಷ್ಯಕ್ಕೆ ಧಕ್ಕೆ ತರಲಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದೇ ಹೋದಲ್ಲಿ ಬ್ಯಾಂಕ್ ವಿರುದ್ಧ ಜನಾಂದೋಲನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಚುನಪ್ಪ ಪೂಜಾರಿ, ಪ್ರೇಮ ಚೌಗಲಾ, ಪ್ರಕಾಶ ಉಮರಾಣಿ, ಶಿವಾನಂದ ಮೆಕ್ಕಳಕಿ, ಶಿವಾನಂದ ಮುಗಳಿ ಇದ್ದರು.
Laxmi News 24×7