ಬಾಗಲಕೋಟೆ : ಇವತ್ತಿನ ವಿದ್ಯಾರ್ಥಿ ನಾಳಿನ ಸ್ಪರ್ಧಾರ್ಥಿ ಮುಂದಿನ ಅಧಿಕಾರಿಗಳಾಗಲು ಸ್ಪರ್ಧಾತ್ಮಕ ಪರೀಕ್ಷೆ ಅಗತ್ಯ. ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ ಎಂದು ಧಾರವಾಡ ಐಎಎಸ್, ಕೆಎಎಸ್, ಅಕಾಡೆಮಿ ಎಮ್. ಎ. ಬಡೆಮೀಯಾ ಅವರು ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ಭೂಗೋಳಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರದ ಮಹತ್ವದ ಕುರಿತು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಭೂಗೋಳದ ಜೊತೆಗೆ ವಿಜ್ಞಾನ, ಇತಿಹಾಸ, ಮಾನಸಿಕ ಸಾಮರ್ಥ್ಯ ವಿಷಯದ ಬಗ್ಗೆ ಅರಿವಿರಬೇಕು. ಸರಕಾರಿ ಉದ್ಯೋಗಕ್ಕೆ ಸಿಇಟಿ ರ್ಯಾಂಕ್ ಅವಶ್ಯಕ. ಪ್ರಚಲಿತ ಘಟನೆಗಳನ್ನು ತಿಳಿದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರದ 25 ಪ್ರಶ್ನೆಗಳು ಕಡ್ಡಾಯವಾಗಿರುತ್ತವೆ. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರಬೇಕು. ಕೋಚಿಂಗ್ಗೆ ಕಲಿಯಲು ಹೋಗುತ್ತಾರೆ. ಆದರೆ ಕೋಚಿಂಗ್ ಹೋಗದೇ ಸರಕಾರಿ ಉದ್ಯೋಗ ಪಡೆದವರನ್ನು ಕಾಣಬಹುದು. ಸ್ಮಾರ್ಟ್ ವರ್ಕ್ ಮಾಡುವವರು ಯಾವಾಗಲೂ ಯಶಸ್ಸಿನ ದಾರಿಯಲ್ಲಿರುತ್ತಾರೆ ಎಂದು ಶ್ಲಾಘೀಸಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್. ಆರ್. ಮೂಗನೂರಮಠ ಮಾತನಾಡಿ ವಿದ್ಯಾರ್ಥಿಗಳು ಪದವಿಯಿಂದಲೇ ಸಾಮಾನ್ಯ ಜ್ಞಾನ ಮತ್ತು ವಿಶೇಷ ಜ್ಞಾನದ ಸಾಮರ್ಥ್ಯ ಹೊಂದಿರಬೇಕು. ಪರೀಕ್ಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಭಿನ್ನವಾಗಿರುತ್ತವೆ. ಮೋನಚಾದ ಚಿಂತನೆ ಅಗತ್ಯ. ಪರೀಕ್ಷೆ ತಯಾರಿಯಿಂದ ಸಾಮಾನ್ಯ ಜ್ಞಾನಭಿವೃದ್ಧಿ, ಭಾಷಾ ಬಳಕೆ, ಶಬ್ದ ಸರಾಗತಿ, ಅಂಕಗಣಿತ, ಸಂಖ್ಯಾಶಾಸ್ತ್ರ ಬಗ್ಗೆ ಮಾಹಿತಿ ದೊರೆಯುತ್ತದೆ. ಮಹಾವಿದ್ಯಾಲಯದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಬಳಸಿಕೊಳ್ಳಿ. ಗ್ರಂಥಾಲಯದಲ್ಲಿ ಶ್ರಮ ಹಾಕಿದವನು ಸ್ಪರ್ಧಾತ್ಮಕತೆಯಲ್ಲಿ ಯಶಸ್ಸು ಗಳಿಸುತ್ತಾನೆ ಎಂದರು.
ಕಾರ್ಯಾಗಾರದಲ್ಲಿ ಪ್ಲೇಸ್ಮೆಂಟ್ ಸೆಲ್ ಅಧಿಕಾರಿ ಎಸ್.ವಿ.ಕಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಐಕ್ಯೂಎಸಿ ಘಟಕದ ಸಂಯೋಜಕ ಡಾ.ಎ.ಯು. ರಾಠೋಡ್, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್. ಎಸ್. ಹಂಚಾಟೆ, ಕಾರ್ಯಕ್ರಮ ಸಂಯೋಜಕ ಎಮ್.ಎಸ್. ಬನ್ನಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7