ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಸಿಂಗಾಪುರ್ಗಿಂತಲೂ ಉತ್ತಮವಾದ ಅಂತಾರಾಷ್ಟ್ರೀಯ ಬಸ್ ನಿಲ್ದಾಣ ಮಾಡೋದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ವಿಷಯ ಪ್ರಸ್ತಾಪ ಮಾಡಿದರು. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣವನ್ನು ಅಂತಾರಾಷ್ಟ್ರೀಯ ಬಸ್ ನಿಲ್ದಾಣದ ಮಾದರಿಯಲ್ಲಿ ಮರು ಅಭಿವೃದ್ಧಿ ಮಾಡಬೇಕು. ಮೆಜೆಸ್ಟಿಕ್ ನಿಲ್ದಾಣ 40 ಎಕರೆ ಜಾಗದಲ್ಲಿ ಮೆಟ್ರೋ, ಕೆಎಸ್ಆರ್ಟಿಸಿ ಸ್ವಲ್ಪ ಜಾಗ ನೀಡಲಾಗಿದೆ. 32 ಎಕರೆ ಜಾಗ ಬಸ್ ನಿಲ್ದಾಣಕ್ಕೆ ಉಳಿಯಲಿದೆ. ಚದರ ಅಡಿಗೆ 1 ಲಕ್ಷ ಬೆಲೆ ಇದೆ. ಈ ಜಾಗವನ್ನು ವಾಣಿಜ್ಯ ಬಳಕೆಗೆ ಬಳಕೆ ಆಗುವಂತೆ ಅಭಿವೃದ್ಧಿ ಮಾಡಬೇಕು. 1.40 ಕೋಟಿ ಜನರು ಬೆಂಗಳೂರಿನಲ್ಲಿ ಇದ್ದಾರೆ. ಈ ಜಾಗ 20-30 ಸಾವಿರ ಕೋಟಿ ಬೆಲೆ ಬಾಳುತ್ತಿದೆ. ಪಿಪಿಪಿ ಮಾಡೆಲ್ನಲ್ಲಿ ಅಭಿವೃದ್ಧಿ ಮಾಡೋದಾಗಿ ಸರ್ಕಾರ ಹೇಳಿದೆ. ಸಿಂಗಾಪುರ್ ಮಾದರಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಬಸ್ ನಿಲ್ದಾಣ ಅಭಿವೃದ್ಧಿ ಮಾಡಬೇಕು. ಬಿಎಂಟಿಸಿ ಸಾಲದಲ್ಲಿ ನಡೆಯುತ್ತಿದೆ. ಹೀಗಾಗಿ ಇಲ್ಲಿ ಕಾಂಪ್ಲೆಕ್ಸ್ ಅಭಿವೃದ್ಧಿ ಮಾಡಿದ್ರೆ ಹೆಚ್ಚು ಲಾಭ ಬರಲಿದೆ. ಇದರಿಂದ ನಿಗಮಕ್ಕೆ ವರಮಾನ ಬರಲಿದೆ ಎಂದು ಒತ್ತಾಯ ಮಾಡಿದರು.
ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡಿ, ಮೆಜೆಸ್ಟಿಕ್ನಲ್ಲಿ 32 ಎಕರೆ ಜಾಗ ಇದೆ. ನಿತ್ಯ 11 ಸಾವಿರ ಟ್ರಿಪ್ ಬಸ್ ಒಡಾಡುತ್ತದೆ. ಇಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಮಾಡುವ ಉದ್ದೇಶ ಇದೆ. ಸಿಂಗಾಪುರ್ಗಿಂತ ಉತ್ತಮ ನಿಲ್ದಾಣ ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ವರದಿ ಪಡೆಯಲು ಕ್ರಮವಹಿಸಲಾಗಿದೆ. ವರದಿ ಬಂದ ಬಳಿಕ ಕ್ಯಾಬಿನೆಟ್ನಲ್ಲಿ ಇಟ್ಟು ಚರ್ಚೆ ಮಾಡ್ತೀವಿ. ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಹೆಸರಿನಲ್ಲಿ ಇದನ್ನ ಮಾಡುತ್ತೇವೆ. ಸರ್ಕಾರ- ಖಾಸಗಿ ಸಹಭಾಗಿತ್ವದಲ್ಲಿ ಇದನ್ನ ಮಾಡಲಿದ್ದು, ಅಡ್ವೈಸರಿ ಪಡೆಯಲು ನಾವು ಮುಂದಾಗಿದ್ದೇವೆ. ಸಿಂಗಾಪುರ್ಗಿಂತ ಉತ್ತಮವಾಗಿ ಅಂತಾರಾಷ್ಟ್ರೀಯ ಬಸ್ ನಿಲ್ದಾಣ ಮಾಡುತ್ತೇವೆ ಎಂದು ತಿಳಿಸಿದರು.
Laxmi News 24×7