ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಾವು ಹೊಣೆಯಲ್ಲ ಎಂದು ಆರ್ಸಿಬಿ (RCB) ಪರ ವಕೀಲರು ವಾದಿಸಿದ್ದಾರೆ.
ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ರದ್ದು ಕೋರಿ ಆರ್ಸಿಬಿ, ಕೆಎಸ್ಸಿಎ, ಡಿಎನ್ಎ ಹೈಕೋರ್ಟ್ನಲ್ಲಿಂದು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಆರ್ಸಿಬಿ, ಕೆಎಸ್ಸಿಎ, ಡಿಎನ್ಎ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಸರ್ಕಾರ ಪರ ವಕೀಲರಾದ ಎಸ್ಪಿಪಿ ಬಿ.ಟಿ.ವೆಂಕಟೇಶ್ ಅವರು ಪ್ರಕರಣದ ಚಾರ್ಜ್ಶೀಟ್ ಸಿದ್ಧವಾಗಿದೆ. ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದು, ಬಳಿಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಎಸ್ಪಿಪಿ ಬಿ.ಟಿ.ವೆಂಕಟೇಶ್ ಅವರ ಮನವಿಗೆ ಆರ್ಸಿಬಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶವಿದೆ. ಹೀಗಾಗಿ ಎಫ್ಐಆರ್ ರದ್ದು ಕೋರಿರುವ ನಮ್ಮ ವಾದ ಪರಿಗಣಿಸಬೇಕು. ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ಸಂಸ್ಥೆಗಳನ್ನು ಹೊಣೆ ಮಾಡಬಾರದು. ಅರ್ಜಿ ತೀರ್ಮಾನಿಸದೇ ಆರೋಪಪಟ್ಟಿಗೆ ಅನುಮತಿ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮ ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಅಂತಿಮ ವರದಿ ಸಲ್ಲಿಸದಂತೆ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ. ಇದೇ ವೇಳೆ ಮಾ.14ರೊಳಗೆ ಕೋರ್ಟ್ಗೆ ಆಕ್ಷೇಪಣೆ ಹಾಗೂ ದಾಖಲೆ ಸಲ್ಲಿಸಲು ಸೂಚನೆ ನೀಡಿದೆ.
ಇತ್ತ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಈ ಬಾರಿಯ ಐಪಿಎಲ್ ಉದ್ಘಾಟನೆ ಪಂದ್ಯ ಹಾಗೂ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಸೇರಿದಂತೆ ಒಟ್ಟು 7 ಪಂದ್ಯಗಳು ನಡೆಯಲಿವೆ. ಅಲ್ಲದೆ, ಆರ್ಸಿಬಿ ಕೂಡ 5 ಪಂದ್ಯಗಳನ್ನು ತನ್ನ ತವರಿನಲ್ಲಿ ಆಡಲು ಒಪ್ಪಿಗೆ ನೀಡಿದೆ. ಉಳಿದ 2 ಪಂದ್ಯಗಳನ್ನು ಛತ್ತೀಸಘಡದ ರಾಯಪುರ ಮೈದಾನದಲ್ಲಿ ಆಡಲಿದೆ.
ಈ ಬಗ್ಗೆ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತಾಡಿ, ತಜ್ಞರ ಸಮಿತಿ ನೀಡಿದ್ದ ಟೈಂಲೈನ್ನಲ್ಲಿ ಸಾಧಿಸಿದ್ದೇವೆ. ಚಿನ್ನಸ್ವಾಮಿಯಲ್ಲಿ ಪಂದ್ಯ ಆಡಲು ಆರ್ಸಿಬಿ ಒಪ್ಪಿದೆ, ಮತ್ತೆ ನಮ್ಮ ಕ್ರೀಡಾಂಗಣಕ್ಕೆ ಐಪಿಎಲ್ ಬಂದಿದೆ ಅಂದಿದ್ದಾರೆ. ಕಳೆದ ಜೂನ್ನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದರು. ಅದಾದ ಬಳಿಕ, ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ನಿರ್ಬಂಧ ಹೇರಿತ್ತು. ಆದರೆ, ಕಳೆದ ತಿಂಗಳು ಸರ್ಕಾರದಿಂದ ಅನುಮತಿ ಸಿಕ್ಕಿತ್ತು.
Laxmi News 24×7