ಬೆಳಗಾವಿ : ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಜನ ಚಳುವಳಿ ತೀವ್ರಗೊಳಿಸಬೇಕಾಗುತ್ತದೆ ಎಂದು ಡಾ.ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಎಚ್ಚರಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ವಿರೋಧಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಎಐಡಿಎಸ್ಒ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ಪೋಷಕರ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಶಿಕ್ಷಣದ ಉಳಿವಿದೆ. ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆಯವರ ಪರಿಶ್ರಮದಿಂದ ಬಂದಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಕನ್ನಡ ಪ್ರಾಧ್ಯಾಪಕ ಡಾ.ಎಚ್.ಬಿ.ಕೋಲಕಾರ ಮಾತನಾಡಿ, ಖಾಸಗಿ ಸಂಸ್ಥೆಗಳನ್ನು ಬಲಪಡಿಸುವ ತಂತ್ರವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಬಂಡವಾಳಶಾಹಿಗಳೊಂದಿಗೆ ಆಳ್ವಿಕರು ರಾಜಿ ಮಾಡಿಕೊಂಡಿದ್ದಾರೆ. ಖಾಸಗೀಕರಣಕ್ಕೆ ಒತ್ತು ನೀಡಿ ಬಡವರ ಬದುಕನ್ನು ದುಸ್ತರ ಗೊಳಿಸಲಾಗಿದೆ. ಈ ನಾಡಿನ ಬಡವರ ಬದುಕನ್ನು ಕಾಪಾಡಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಉಳಿಸುವುದು ಅಗತ್ಯ ಎಂದರು.
ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನ 2500 ಕೋಟಿ ಸಾಲದ ಹಿಂದೆ ಬಿದ್ದಿರುವ ಸರ್ಕಾರ ಶತಾಯಗತಾಯ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹವಣಿಸುತ್ತಿದೆ. ಒಂದೆಡೆ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಾ ಇನ್ನೊಂದೆಡೆ ಮುಚ್ಚಲು ಪಿತೂರಿ ನಡೆಸಿದ್ದಾರೆ. ಸರ್ಕಾರ ನಿರ್ಧಾರ ಬದಲಿಸದಿದ್ದರೆ. ಜನರ ಧಂಗೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ ಚಂದ್ರ, ಮಹಾದೇವ ತಳವಾರ, ರಾಮು ಹನಗಂಡಿ, ಮನೋಹರ ಹುಂದ್ರೆ, ಲಕ್ಕಪ್ಪ ಬಿಜ್ಜನ್ನವರ, ಗೀತಾ ರಾಯಗೋಳ, ಸಂಜಯ ರಜಪೂತ, ಪ್ರೇಮ ಚೌಗಲಾ, ಬಲರಾಮ ಮಾಸೇನಟ್ಟಿ, ಶಿವರಡ್ಡಿ ಹುಚ್ಚರಡ್ಡಿ, ಬಾಳಪ್ಪ ಗುಡೇನಟ್ಟಿ, ಮಲ್ಲಿಕಾರ್ಜುನ ಮರಕುಂಬಿ, ವಾಜಿದ ಹಿರೇಕೊಡಿ, ಪ್ರಭು ಕಾಕತಿಕರ, ಎಸ್.ಎಸ್.ಮೂಕನವರ, ಶ್ರೀನಿವಾಸ ತಾಳೂಕರ, ಮಲ್ಲಪ್ಪ ಗುಡಗೇನಟ್ಟಿ, ಮಂಜುನಾಥ ಜಲ್ಲಿ, ಮಹಾಂತೇಶ ಬಿಳೂರ ಇತರರಿದ್ದರು.
Laxmi News 24×7