ಬೆಳಗಾವಿ: ಇಲ್ಲಿನ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಹೊಸ ಆಡಳಿತ ಮಂಡಳಿಯ ಮೂರು ತಿಂಗಳ ಅವಧಿಯಲ್ಲಿ ಠೇವಣಿ 500 ಕೋಟಿ ರೂ. ಹೆಚ್ಚಳವಾಗಿದೆ. ಆದರೆ, ಬ್ಯಾಂಕಿನ ವಹಿವಾಟು ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಡಾ.ಮಹಾಂತೇಶ ಕಡಾಡಿ ಸೇರಿ ನಾಲ್ವರಿಗೆ ಕಾನೂನು ನೋಟೀಸ್ ನೀಡಲಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ರೀತಿಯ ಠೇವಣಿ ಕಡಿಮೆಯಾಗಿಲ್ಲ. ನಬಾರ್ಡ್ ನಿಯಮಗಳ ಅನ್ವಯ ರೈತರಿಗೆ, ಕೈಗಾರಿಕೆ, ಕೃಷಿಯೇತರ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಆರ್ಥಿಕ ವರ್ಷ ಮಾರ್ಚ್ ಅಂತ್ಯದ ಒಳಗಾಗಿ ಎಲ್ಲರೂ ಬಡ್ಡಿ ಸಮೇತ ಸಾಲದ ಕಂತು ಪಾವತಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಯಾವುದೇ ರೀತಿಯಲ್ಲಿ ಠೇವಣಿ ಕಡಿಮೆಯಾಗಿಲ್ಲ . ಆದರೆ, ರಾಜ್ಯ ಸರ್ಕಾರದಿಂದ ಬರಬೇಕಾಗಿದ್ದ 160 ಕೋಟಿ ರೂ.ಅನುದಾನ ಬಿಡುಗಡೆ ಆಗಿಲ್ಲ. ಆದರೂ ಠೇವಣಿ ಆಧಾರದ ಮೇಲೆ ಕೃಷಿಯೇತರ ಚಟುವಟಿಕೆ ಸಾಲ ಸೌಲಭ್ಯ ಹೆಚ್ಚಿಸಲಾಗುತ್ತಿದೆ ಎಂದರು.
ಈಗಾಗಲೇ ಜಿಲ್ಲೆಯ ಅಂದಾಜು 4 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3,710 ಕೋಟಿ ರೂ. ಸಾಲ ನೀಡಲಾಗಿದೆ. 2026-27ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೈತರ ಹೊಸ ಕೃಷಿ ಸಾಲ ನೀಡಲಾಗುವುದು. ನಬಾರ್ಡ್ ನಿಯಮದಂತೆ ಪ್ರತಿ ಎಕರೆಗೆ 40 ಸಾವಿರ ರೂ. ಸಾಲಭ್ಯ ಕಲ್ಪಿಲಾಗಿದೆ. ಈ ಪ್ರಮಾಣದಲ್ಲಿ 1.50 ಲಕ್ಷ ರೂ. ಹೆಚ್ಚಳ ಮಾಡುವಂತೆ ಬೇಡಿಕೆಯಾಗಿದೆ. ಡಿಸಿಸಿ ಬ್ಯಾಂಕಿನ ಕೇಂದ್ರ ಕಚೇರಿ ಸೇರಿ 100 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 2081ಸಿಬ್ಬಂದಿಗೆ ಜೀವ ವಿಮೆ ಮಾಡಿಸಲಾಗುತ್ತಿದೆ. ಇದರಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಶೇ.58ರಷ್ಟು, ಇನ್ನೂಳಿದಿದ್ದ ಆಯಾ ಸೂಸೈಟಿ ಶಾಖೆಗಳು ಬಾಕಿ ಹಣ ಭರಿಸುತ್ತಿವೆ ಎಂದು ತಿಳಿಸಿದರು.
ಉಪಾಧ್ಯಕ್ಷ ಭರಮಗೌಡ ಕಾಗೆ, ನಿರ್ದೇಶಕರಾದ ಅಪ್ಪಾಸಾಹೇಬ ಕುಲಗುಡೆ, ನೀಲಕಂಡ ಕಪ್ಪಲಗುದ್ದಿ, ಚನ್ನರಾಜ ಹಟ್ಟಿಹೊಳಿ, ವಿರುಪಾಕ್ಷಿ ಮಾಮನಿ, ನಾನಾಸಾಹೇಬ ಪಾಟೀಲ, ರಾಹುಲ ಜಾರಕಿಹೊಳಿ, ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಸಿಇಒ ಎನ್.ಜಿ.ಕಲಾವಂತ ಇತರರಿದ್ದರು.
Laxmi News 24×7