ಬೆಳಗಾವಿ: ಪಂಜಾಬ ರಾಜ್ಯದ ಭಟಿಂಡಾದಲ್ಲಿ ನಡೆದ ಸೇನಾವಾಹನ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದ ತಾಲೂಕಿನ ಕಂಗ್ರಾಳಿ ಖುರ್ದ (ಕೆಎಚ್) ಗ್ರಾಮದ ಯೋಧ ಹವಾಲ್ದಾರ್ ಜಗದೀಶ ಮನೋಹರ ಶಿಂಧೆ ಅಂತ್ಯಕ್ರಿಯೆ ಸಕಲ ಸೇನಾ ಹಾಗೂ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.
24 ವರ್ಷಗಳಿಂದ ಸೇನೆಯಲ್ಲಿದ್ದ ಜಗದೀಶ ಇನ್ನು ನಾಲ್ಕು ತಿಂಗಳಿಗೆ ನಿವೃತ್ತರಾಗಲಿದ್ದರು. ಭಟಿಂಡಾ ಆರ್ಮಿ ಏರ್ ಡಿಫೆನ್ಸ್ ಸೇನಾ ಕೇಂದ್ರದಲ್ಲಿ ಅವರು ಸೇವೆಯಲ್ಲಿದ್ದರು. ಜಗದೀಶ ಅವರ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ಸಾಂಬ್ರಾ ವಿಮಾನ ನಿಲ್ದಾಣ ತಲುಪಿದಾಗ, ಬೈಕ್ ರ್ಯಾಲಿ ಮೂಲಕ ಗ್ರಾಮಕ್ಕೆ ಕರೆದೊಯ್ಯಲಾಯಿತು.
ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಗ್ರಾಪಂದಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಬೀದಿಗಳಲ್ಲಿ ಜರುಗಿದ ಅಂತಿಮ ಯಾತ್ರೆಯಲ್ಲಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ತ್ರಿವರ್ಣಧ್ವಜ ಹಿಡಿದು, ‘ಜಗದೀಶ ಶಿಂಧೆ ಅಮರ ರಹೇ’ ಎಂಬ ಘೋಷಣೆ ಕೂಗಿದರು.
ಶಾಲಾ ಆವರಣದಲ್ಲಿ ಸಕಲ ಸೇನಾ ಗೌರವ ಸಲ್ಲಿಸಲಾಯಿತು. ಅಂತಿಮ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಸಂಜಯ ಪಾಟೀಲ, ರಮಾಕಾಂತ ಕೊಂಡಸ್ಕರ್, ಶಿವಾಜಿ ಸುಂಠಕರ, ಗ್ರಾಪಂ ಅಧ್ಯಕ್ಷೆ ದೊಡ್ಡವ್ವ ಮಾಳಗಿ, ಉಪಾಧ್ಯಕ್ಷ ಕಲ್ಲಪ್ಪ ಪಾಟೀಲ, ಸದಸ್ಯರಾದ ವಿನಾಯಕ ಕಮ್ಮಾರ, ಯಲ್ಲಪ್ಪ ಪಾಟೀಲ, ರಾಕೇಶ ಪಾಟೀಲ, ವೈಜನಾಥ ಬೆನ್ನಾಳಕರ, ಪ್ರಶಾಂತ ಪಾಟೀಲ, ಯಶೋಧನ ತುಳಸ್ಕರ್, ಲತಾ ಪಾಟೀಲ, ಸೇನಾಧಿಕಾರಿಗಳು, ಮಾಜಿ ಸೈನಿಕರು, ವಿವಿಧ ಅಧಿಕಾರಿಗಳು ಅಂತಿಮನಮನ ಸಲ್ಲಿಸಿದರು.
Laxmi News 24×7