ಖಾನಾಪೂರ–ಲೋಂಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಟರೆ ಸಮೀಪ ಭೀಕರ ಅಪಘಾತ; ದ್ವಿಚಕ್ರ ವಾಹನ ಸವಾರನ ಮೃತ್ಯು, ಮತ್ತೊಬ್ಬನಿಗೆ ಗಂಭೀರ ಗಾಯ..
ಖಾನಾಪೂರ–ಲೋಂಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಟರೆ ಗ್ರಾಮದ ಸಮೀಪ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ಮೃತ್ಯು ಸಂಭವಿಸಿದ್ದು, ಅವನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದರ ಬಗ್ಗೆ ತಿಳಿದು ಬಂದ ಹೆಚ್ಚಿನ ಮಾಹಿತಿ ಏನೆಂದರೆ ಬೆಳಗಾವಿಯಿಂದ ಗೋವಾಕ್ಕೆ ತೆರಳುತ್ತಿದ್ದ ಕಾರಿನ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿದೆ. ಇದೇ ವೇಳೆ ರಾಮನಗರದಿಂದ ತನ್ನ ಮೂಲ ಗ್ರಾಮ ಗರ್ಲಗುಂಜಿ (ತಾ. ಖಾನಾಪೂರ) ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಆ ಕಾರು ರಭಸದಿಂದ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಗರ್ಲಗುಂಜಿ ಗ್ರಾಮದ ಯುವಕ ಗೌರೇಶ್ ಸುರೇಶ್ ಕುಂಬಾರ (ವಯಸ್ಸು 34 ವರ್ಷ) ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಕಾಲಿನ ರಕ್ತನಾಳ ತುಂಡಾಗಿದೆ . ಜೊತೆಗೆ ದ್ವಿಚಕ್ರ ವಾಹನದಲ್ಲಿದ್ದ ಅವರ ಸ್ನೇಹಿತ ಶಿವಾಜಿ ಪ್ರಕಾಶ ಲೋಹಾರ ಅವರ ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.
ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಂಬ್ಯುಲೆನ್ಸ್ ಮೂಲಕ ಯಳ್ಳೂರುನಲ್ಲಿರುವ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ತಪಾಸಣೆಯ ನಂತರ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಮುಂದಿನ ಚಿಕಿತ್ಸೆಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಆಂಬ್ಯುಲೆನ್ಸ್ ಅಪಘಾತ ಸ್ಥಳಕ್ಕೆ ತಲುಪಲು ವಿಳಂಬವಾಗಿದ್ದು, ಬೆಳಗಾವಿಗೆ ಕರೆದೊಯ್ಯುವಲ್ಲಿಯೂ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಅತಿರಕ್ತಸ್ರಾವದಿಂದ ಗೌರೇಶ್ ಸುರೇಶ್ ಕುಂಭಾರ ಅವರು ಮಾರ್ಗಮಧ್ಯೆಯಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Laxmi News 24×7