ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಗಳಲೆ ರೋಗ(Hemorrhagic Septicemia) ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಸೋಂಕು ಸಸ್ಯಾಹಾರಿ ಪ್ರಾಣಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ. ಕ್ರಾಂತಿ ಸ್ಪಷ್ಟಪಡಿಸಿದರು.
ಬುಧವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಮಾಹಿತಿ ನೀಡಿದ ಅವರು, ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಮೃತ ಕೃಷ್ಣಮೃಗಗಳ ಅಂಗಾಂಗಳ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇಂದು ಆ ವರದಿ ಬಂದಿದೆ. ಪ್ರಾಥಮಿಕ ಪರಿಶೀಲನಾ ವರದಿಯಂತೆ ಕೃಷ್ಣಮೃಗಗಳು ಮೊದಲೇ ಶಂಕಿಸಿದಂತೆ ಗಳಲೆ ರೋಗದಿಂದ ಮೃತಪಟ್ಟಿವೆ. ಈ ಕಾಯಿಲೆಯು ಸಾಂಕ್ರಾಮಿಕವಾಗಿದ್ದು, ಇತರೆ ಸಸ್ಯಾಹಾರಿ ಪ್ರಾಣಿಗಳಿಗೂ ಸಹ ಹರಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಿರು ಮೃಗಾಲಯದ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪಶು ಸಂಗೋಪನಾ ಇಲಾಖೆಗೂ ತಿಳಿಸಲಾಗಿದೆ ಎಂದು ಹೇಳಿದರು.
7 ಕೃಷ್ಣಮೃಗಗಳು ಆರೋಗ್ಯವಾಗಿವೆ: ಸದ್ಯ ಬದುಕುಳಿದಿರುವ 7 ಕೃಷ್ಣಮೃಗಗಳು ಚೆನ್ನಾಗಿ ಆಹಾರ ತಿಂದು, ಆರೋಗ್ಯವಾಗಿವೆ. ತಜ್ಞ ವೈದ್ಯರು ಹೇಳಿದ ಪ್ರಕಾರ ಅವುಗಳನ್ನು ಆಬ್ಸರ್ವೇಶನ್ ಅವಧಿಯಲ್ಲಿ ಇಟ್ಟಿದ್ದೇವೆ. ಇದು ಇನ್ನೂ ಒಂದಿಷ್ಟು ದಿನಗಳವರೆಗೆ ಮುಂದುವರಿಯಲಿದೆ. ಅದೇ ರೀತಿ ಇನ್ನುಳಿದ ಪ್ರಾಣಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಎನ್.ಇ. ಕ್ರಾಂತಿ ಮಾಹಿತಿ ನೀಡಿದರು.
Laxmi News 24×7