ಹುಬ್ಬಳ್ಳಿ: ನಗರದ ಹಳೇ ಕೋರ್ಟ್ ವೃತ್ತದ ಬಳಿಯ ಸಾಯಿ ಮಂದಿರದ ಎದುರು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮಲ್ಟಿ – ಲೆವೆಲ್ ಕಾರು ಪಾರ್ಕಿಂಗ್ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿ ಆರಂಭವಾಗಿ ಏಳು ವರ್ಷ ಕಳೆದರೂ ಕೂಡ ನೆಲಮಟ್ಟ ಬಿಟ್ಟು ಮೇಲೇಳುತ್ತಿಲ್ಲ. ಇದು ಮಹಾನಗರ ಪಾಲಿಕೆಗೆ ತೀವ್ರ ತಲೆನೋವು ತಂದೊಡ್ಡಿದ್ದು, ಗುತ್ತಿಗೆ ರದ್ದು ಮಾಡಲು ಚಿಂತನೆ ನಡೆಸಿದೆ.
ಅವಳಿ ನಗರದ ವಾಹನಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾದ ವಾಹನ ನಿಲುಗಡೆಗೆ ಆನುಕೂಲವಾಗುವ ನಿಟ್ಟಿನಲ್ಲಿ ಈ ಮಲ್ಟಿ-ಲೆವೆಲ್ ಕಾರು ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿತ್ತು. ಆದರೆ, ಏಳು ವರ್ಷ ಕಳೆದರೂ ಯೋಜನೆ ಸಫಲವಾಗಿಲ್ಲ. ಹೀಗಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಹಿಂದೆಯೇ ಗುತ್ತಿಗೆದಾರನಿಗೆ ಕೋಟ್ಯಂತರ ರೂ. ದಂಡ ಹಾಕಿ ಹಲವು ನೋಟಿಸ್ ಕೂಡ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಚ್ಡಿಎಸ್ಸಿಎಲ್) ಸಾರ್ವಜನಿಕ – ಖಾಸಗಿ ಸಹಭಾಗಿತ್ವ (ಪಿಪಿಪಿ) ಮೋಡ್ನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ (ಎಚ್ಡಿಎಂಸಿಎಲ್ನ 10 ಕೋಟಿ ಷೇರುಗಳನ್ನು ಒಳಗೊಂಡಿದೆ) ನಿರ್ಮಾಣವಾಗುತ್ತಿರುವ ಬಹುಮಹಡಿ ಕಾರು ಪಾರ್ಕಿಂಗ್ ಯೋಜನೆಯಾಗಿದೆ. 2020ರಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್ ಸೇರಿ ಇತರ ಕಾರಣಾಂತರಗಳಿಂದ ಹಲವಾರು ಅವಕಾಶಗಳನ್ನು ನೀಡಲಾಗಿದೆ.
ಹುಬ್ಬಳ್ಳಿಯ ಸುರೇಶ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿಯಲ್ಲಿ ಅತ್ಯಂತ ಕಳಪೆ ಪ್ರಗತಿ ಕಂಡಿದೆ. ಬಹುಮಹಡಿ ಕಟ್ಟಡ ಒಂದು ಸೇಫ್ ಲೆವಲ್ಗೆ ಬರುವವರೆಗೆ ಗುತ್ತಿಗೆ ರದ್ದು ಮಾಡಲು ಸಾಧ್ಯವಾಗಿಲ್ಲ. ಈ ಕುರಿತಂತೆ ಬೋರ್ಡ್ ಮಟ್ಟದಲ್ಲಿ ಚರ್ಚೆ ಆಗಿದೆ. ಕಟ್ಟಡ ಅತ್ಯಂತ ಮಹತ್ವದ ಜಾಗದಲ್ಲಿ ಇರುವುದರಿಂದ ಗುತ್ತಿಗೆ ರದ್ದು ಮಾಡಿದರೆ ಸಮಸ್ಯೆ ಆಗುವ ಭೀತಿ ಇದೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರಿಗೆ 2 ಕೋಟಿ 71 ಲಕ್ಷ ರೂ. ದಂಡ ಹಾಕಿ ಕಾಮಗಾರಿ ಕೂಡಲೇ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ.
Laxmi News 24×7