ಬೆಂಗಳೂರು: ಖಾಲಿ ಇರುವ ವಲಯ ಅರಣ್ಯಾಧಿಕಾರಿ (ಆರ್.ಎಫ್.ಓ) ಹುದ್ದೆಗಳ ಪೈಕಿ ಶೇ.50ರಷ್ಟು ಹುದ್ದೆಯನ್ನು ಬಡ್ತಿಯ ಮೂಲಕ ಹಾಗೂ ಉಳಿದ ಶೇ.50ರಷ್ಟನ್ನು ನೇರ ನೇಮಕಾತಿ ಮೂಲಕ ತುಂಬಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅರಣ್ಯಶಾಸ್ತ್ರ ಪದವೀಧರರು ಮತ್ತು ವಿದ್ಯಾರ್ಥಿಗಳನ್ನು ಇಂದು ಭೇಟಿ ಮಾಡಿ, ಅವರ ಅಹವಾಲು ಆಲಿಸಿ ಮಾತನಾಡಿದ ಸಚಿವರು, ಅರಣ್ಯ ವಿಜ್ಞಾನ ಪದವೀಧರರು ಮತ್ತು ವಿದ್ಯಾರ್ಥಿಗಳ ಮನವಿಯ ಬಳಿಕ ತಾವು ಈ ಸೂಚನೆ ನೀಡಿದ್ದಾಗಿ ತಿಳಿಸಿದರು.
ಆಡಳಿತ ಸುಧಾರಣಾ ಇಲಾಖೆಯು ಉಪ ವಲಯ ಅರಣ್ಯಾಧಿಕಾರಿಗಳ (ಡಿಆರ್.ಎಫ್.ಓ) ಹುದ್ದೆಗಳ ಭರ್ತಿಗೆ ನೀಡಿದ್ದ ಶಿಫಾರಸನ್ನು ಒಪ್ಪದೇ ಬಡ್ತಿ ಮತ್ತು ನೇರ ನೇಮಕಾತಿ ಎರಡಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈಗ ನೀವು ಅರಣ್ಯ ಇಲಾಖೆಯ ಎಲ್ಲ ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆ ಎಂದು ಪರಿಗಣಿಸಬೇಕು ಎಂಬ ಬೇಡಿಕೆ ಇಟ್ಟಿದ್ದೀರಿ. ಆದರೆ ಪಶುವೈದ್ಯಕೀಯ ವಿಜ್ಞಾನ ಓದಿದವರಿಗೆ ಹಾಗೂ ಪ್ರಾಣಿಶಾಸ್ತ್ರ, ಸಸ್ಯ ಶಾಸ್ತ್ರ ಓದಿದವರನ್ನೂ ಪರಿಗಣಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ. ವಿದ್ಯಾರ್ಥಿಗಳು ಈ ಪ್ರತಿಭಟನೆ ಕೈಬಿಟ್ಟು, ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ಸರ್ಕಾರ ವಿದ್ಯಾರ್ಥಿಗಳ ಜೊತೆಗಿದೆ ಎಂದೂ ತಿಳಿಸಿದರು.
Laxmi News 24×7